ತುಮಕೂರು: ಕಾರ್ತಿಕ ಅಮಾವಾಸ್ಯೆ ಅಂಗವಾಗಿ ನಗರದ ಕೆ.ಆರ್.ಬಡಾವಣೆಯ ರಾಮಮಂದಿರದಲ್ಲಿ ಏರ್ಪಡಿಸಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ದೀಪೋತ್ಸವವೆಂದರೆ ಹಣತೆಗೆ ಎಣ್ಣೆ, ಬತ್ತಿ ಹಾಕಿ ಅಗ್ನಿಸ್ಪರ್ಶದಿಂದ ಹತ್ತಿಸಿ ಬೆಳಕು ಮೂಡಿಸುವುದು. ಅದೇ ರೀತಿಯಲ್ಲಿ ನಮ್ಮ ನಡವಳಿಕೆಯಿಂದ ಅಂತರಾತ್ಮದಲ್ಲೂ ಬೆಳಕು ಮೂಡಿಸಿಕೊಂಡು ಸಮಾಜಕ್ಕೆ ದಾರಿದೀಪವಾಗಬೇಕು’ ಎಂದು ನುಡಿದರು.
ಕಾರ್ತಿಕ ಮಾಸದ ಅಮಾವಾಸ್ಯೆಯೊಂದಿಗೆ ಬೆಳಕಿನ ಹಬ್ಬದ ಮಾಸವು ಅಂತ್ಯವಾಗುತ್ತಿದೆ. ಈ ದಿನ ಕಗ್ಗತ್ತಲೆಯನ್ನು ಲಕ್ಷದೀಪಗಳನ್ನು ಬೆಳಗುವುದರ ಮೂಲಕ ಓಡಿಸುತ್ತಿರುವುದು ಶ್ಲಾಘನೀಯ ಎಂದರು.
ಭಾವಾಲಯ ತಂಡದ ರೂಪಾ ನಾಗೇಂದ್ರ ಅವರ ಸಾರಥ್ಯದಲ್ಲಿ ವಿದ್ಯಾರ್ಥಿಗಳು ಸುಗಮ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
ಮಹಾನಗರಪಾಲಿಕೆ ಸದಸ್ಯ ಇನಾಯತ್, ಮಹೇಶ್, ಲಕ್ಷ ದೀಪೋತ್ಸವ ಸಮಿತಿ ಮಂಡಳಿಯ ನಾಗೇಶ್, ವೆಂಕಟಾಚಲಪತಿಶೆಟ್ಟಿ, ಸೂರ್ಯನಾರಾಯಣ, ಬಸವರಾಜು ಇದ್ದರು.