ತುಮಕೂರು: ‘ನಾನು ಹೊರಗಿನವ ಅಲ್ಲ. ನನ್ನನ್ನು ‘ಹೊರಗಿನವರು’ ಎನ್ನುವುದನ್ನು ಇವತ್ತೇ ನಿಲ್ಲಿಸಿ. ಮುಂದಿನ ಎರಡು ದಿನದಲ್ಲಿ ನಗರದಲ್ಲಿ ಮನೆ ಮಾಡುತ್ತೇನೆ. ತುಮಕೂರನ್ನು ಮಾದರಿ ಜಿಲ್ಲೆ ಮಾಡುತ್ತೇನೆ’ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಪರಮೇಶ್ ಏರ್ಪಡಿಸಿದ್ದ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನನ್ನ ಸ್ಪರ್ಧೆ ಬಗ್ಗೆ ಜಿಲ್ಲೆಯ ಕೆಲವು ಪುಣ್ಯಾತ್ಮರು ಆಡಿದ ಮಾತುಗಳಿಂದ ತುಂಬಾ ನೋವಾಗಿದೆ’ ಎಂದರು.
‘ಲೋಕಸಭಾ ಕ್ಷೇತ್ರದಲ್ಲಿ 16 ಲಕ್ಷ ಮತದಾರರ ಪೈಕಿ 3.45 ಲಕ್ಷ ಮತದಾರರು ಇರುವ ಒಂದು ಸಮಾಜ ನನ್ನನ್ನು ತುಳಿಯುತ್ತಿದೆ. ಇದರಿಂದ ನನ್ನ ಗತಿ ಏನಾಗಬಹುದು ಎನ್ನುವುದಕ್ಕಿಂತ ನಿಮ್ಮ ಅಸ್ಮಿತೆ ಯಾವ ರೀತಿಯಾಗುತ್ತದೆ ಎಂಬುವುದನ್ನು ಚಿಂತನೆ ಮಾಡಬೇಕು’ ಎಂದು ಹೇಳಿದರು.
‘ವಿಧಾನಸಭಾ ಚುನಾವಣೆಯಲ್ಲಿ ನನಗೆ ಆದ ಅಪಚಾರವನ್ನು ರಾಷ್ಟ್ರದ ನಾಯಕರು ಮನಗಂಡು ಇಲ್ಲಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದಾರೆ. ಕ್ರಿಯಾಶೀಲ ರಾಜಕಾರಣಿಯನ್ನು ಮನೆಯಲ್ಲಿ ಕೂರಿಸಬಾರದು ಎಂದು ಸ್ಪರ್ಧೆಗೆ ಅನುವು ಮಾಡಿ ಕೊಟ್ಟಿದ್ದಾರೆ. ತುಮಕೂರಿನಿಂದ ಸ್ಪರ್ಧಿಸುವುದು ಬೇಡ ಎಂದು ವರಿಷ್ಠರು ಹೇಳಿದರೆ ತಕ್ಷಣವೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ’ ಎಂದರು.