ಕುಣಿಗಲ್: ‘ಹಿಟ್ ಆ್ಯಂಡ್ ರನ್’ ಪ್ರಕರಣಗಳಲ್ಲಿ ಚಾಲಕರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವ ಕೇಂದ್ರದ ನಿಯಮ ಖಂಡಿಸಿ ಲಾರಿ, ಟ್ರಕ್ ಚಾಲಕರು ಶುಕ್ರವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಉಪತಹಶೀಲ್ದಾರ್ ಯೋಗೀಶ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಚಾಲಕರು ತಾಲ್ಲೂಕು ಕಚೇರಿ ಮುಂದೆ ಸಭೆ ನಡೆಸಿದರು.
ಮುಖ್ಯಸ್ಥ ಶಿವು ಮಾತನಾಡಿ, ಕೇಂದ್ರ ಸರ್ಕಾರದ ನಿಲುವು ಜನವಿರೋಧಿ. ಚಾಲಕರು ಶ್ರೀಮಂತರಲ್ಲ. ‘ಹಿಟ್ ಅ್ಯಂಡ್ ರನ್’ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ಜತೆಗೆ ₹7 ಲಕ್ಷ ದಂಡ ವಿಧಿಸುವ ನಿರ್ಣಯದ ಮಾನದಂಡಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯದೆ ತೀರ್ಮಾನ ತೆಗೆದುಕೊಳ್ಳುವುದರಿಂದ ಚಾಲಕರ ಕುಟುಂಬಗಳು ಬೀದಿಪಾಲಾಗಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಚಾಲಕರಾದ ರಂಗಣ್ಣ, ರಮೇಶ್, ನಾಗರಾಜು ಅಬ್ದುಲ್ ಪಾಷಾ, ಪ್ರಜ್ವಲ್, ಕೆಆರ್ಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು..