ಶಿರಾ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ಈವರೆಗೆ ಜನರಿಗೆ ಒಂದು ಹನಿ ನೀರು ನೀಡಲು ಸಾಧ್ಯವಾಗಿಲ್ಲ ಎನ್ನುವ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ.
ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯಿಂದ 22 ಗ್ರಾಮಗಳಿಗೆ ₹6.10 ಕೋಟಿ ವೆಚ್ಚದಲ್ಲಿ, ಯಲಿಯೂರು ಕೆರೆಯಿಂದ 23 ಗ್ರಾಮಗಳಿಗೆ ₹4.60 ಕೋಟಿ ವೆಚ್ಚದಲ್ಲಿ ಹಾಗೂ ಶಿರಾ ದೊಡ್ಡ ಕೆರೆಯಿಂದ ತಾವರೆಕೆರೆ ಸೇರಿದಂತೆ 64 ಗ್ರಾಮಗಳಿಗೆ ₹15.35 ಕೋಟಿ ವೆಚ್ಚದಲ್ಲಿ ಸೇರಿದಂತೆ ಒಟ್ಟು 109 ಗ್ರಾಮಗಳಿಗೆ ₹26 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡು 5 ವರ್ಷ ಕಳೆದರೂ ಈವರೆಗೆ ನೀರು ನೀಡಿಲ್ಲ.
ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ. ನೀರು ಸಿಕ್ಕರೂ ಫ್ಲೋರೈಡ್ನಿಂದ ಕೂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಶುದ್ಧ ಕುಡಿಯುವ ನೀರು ನೀಡಲು ಸರ್ಕಾರ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿತ್ತು.
ಮಾಜಿ ಶಾಸಕ ಟಿ.ಬಿ.ಜಯಚಂದ್ರ ಅವರ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆತಂದು ಉದ್ಘಾಟಿಸಿದ್ದರೂ, ಯಾವುದೇ ಪ್ರಯೋಜನವಿಲ್ಲದಂತಾಗಿದೆ.
ತಾಲ್ಲೂಕಿಗೆ 0.9 ಟಿಎಂಸಿ ಅಡಿ ಹೇಮಾವತಿ ನೀರು ಹಂಚಿಕೆಯಾಗಿದೆ. ಅದರಲ್ಲಿ ಈ ಗ್ರಾಮಗಳಿಗೆ ಕುಡಿಯುವ ನೀರು ನೀಡುವ ಉದ್ದೇಶದ ಜೊತೆಗೆ ಶಿರಾದಲ್ಲಿ ಕೈಗಾರಿಕಾ ವಲಯ ಪ್ರಾರಂಭ ಆಗುತ್ತಿರುವುದರಿಂದ ನೀರಿನ ಹಂಚಿಕೆ ಹೆಚ್ಚು ಮಾಡಿಸಿಕೊಳ್ಳಬೇಕು. ಆದರೆ ಈವ ರೆಗೆ ಈ ಯೋಜನೆಗಳ ಬಗ್ಗೆ ಯಾರು ಮಾತ ನಾಡದೆ ಜಾಣ ಮೌನಕ್ಕೆ ಜಾರಿದ್ದಾರೆ.
ವಿಧಾನಸಭೆ ಉಪ ಚುನಾವಣೆಯಲ್ಲಿ ಕೇವಲ ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಮಾತ್ರ ಮುನ್ನೆಲೆಗೆ ಬಂದು ನೀರು ಹರಿಸುವ ಭರವಸೆ ನೀಡಲಾಯಿತು. ಈ ಯೋಜನೆಯನ್ನು ಯಾರು ಪ್ರಸ್ತಾಪಿಸಿರಲಿಲ್ಲ. ಕೋಟ್ಯಂ ತರ ರೂಪಾಯಿ ಖರ್ಚು ಮಾಡಿ ಜೋಡಿಸಿರುವ ಯಂತ್ರಗಳು ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ.