ತುಮಕೂರು: ಮೂಡುಬಿದರೆ ಶಿವರಾಮ ಕಾರಂತ ಪ್ರತಿಷ್ಠಾನ ಕೊಡಮಾಡುವ ಈ ಬಾರಿಯ ಶಿವರಾಮ ಕಾರಂತ ಪುರಸ್ಕಾರಕ್ಕೆ ತುಮಕೂರು ವಿಶ್ವವಿದ್ಯಾಲಯದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ನಿತ್ಯಾನಂದ ಬಿ.ಶೆಟ್ಟಿ ಅವರ ‘ಮಾರ್ಗಾನ್ವೇಷಣೆ’ ಕೃತಿ ಆಯ್ಕೆಯಾಗಿದೆ.
ಸಂಶೋಧನಾ ಮೀಮಾಂಸೆಗೆ ಸಂಬಂಧಿಸಿದ ‘ಮಾರ್ಗಾನ್ವೇಷಣೆ’ಯು ವ್ಯಾಪಕ ಚರ್ಚೆ ಹಾಗೂ ವಾಗ್ವಾದಕ್ಕೆ ಒಳಗಾದ ಕೃತಿಯಾಗಿದೆ.
ನಿತ್ಯಾನಂದ ಶೆಟ್ಟಿ ಅವರ ಕೃತಿಯೂ ಸೇರಿದಂತೆ ಪ್ರೊ.ಎಚ್.ಟಿ.ಪೋತೆ ಅವರ ‘ಅಂಬೇಡ್ಕರ್ ಮತ್ತು...’ ಕೃತಿ, ಎಚ್.ಆರ್.ಲೀಲಾವತಿ ಅವರ ‘ಹಾಡಾಗಿ ಹರಿದಾಳೆ’ ಆತ್ಮಕಥೆ, ಬಿ.ಜನಾರ್ದನ ಭಟ್ ಅವರ ‘ವಿನೂತನ ಕಥನ ಕಾರಣ’ ಎಂಬ ವಿಮರ್ಶಾ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೇ 29ರಂದು ಸಂಜೆ 4 ಗಂಟೆಗೆ ಮೂಡಬಿದಿರೆ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.