ತುರುವೇಕೆರೆ: ಇನ್ನೊಬ್ಬರ ನೆರವು ಪಡೆದು ಸಮಾಜದಲ್ಲಿ ಮುಂದೆ ಬಂದ ವ್ಯಕ್ತಿ. ಆ ಸಮಾಜಕ್ಕೆ ಏನನ್ನಾದರೂ ಮರಳಿ ತನ್ನ ಕೈಲಾದ ಕೊಡುಗೆಯನ್ನು ನೀಡಿದಾಗಲೇ ದಾನಕ್ಕೆ ನಿಜವಾದ ಅರ್ಥ ಬರಲು ಸಾಧ್ಯ ಎಂದು ಸಮಾಜ ಸೇವಕ ರಾಮಯ್ಯ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಜಡಿಯಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂದು ಸೇವೆ ಎಂಬ ಪದವನ್ನು ಮುಂದಿಟ್ಟುಕೊಂಡು ಸ್ವಾರ್ಥದಿಂದ ದಾನ ಮಾಡುವವರೆ ಹೆಚ್ಚಿದ್ದು, ಮಕ್ಕಳು ಏಳಿಗೆಗಾಗಿ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ದೃಢ ಸಂಕಲ್ಪದಿಂದ ಸೇವೆ ಮಾಡುವವರ ಸಂಖ್ಯೆ ಅತ್ಯಂತ ವಿರಳವಾಗಿದೆ. ಆದರೆ ನಾನು ನಮ್ಮೂರ ಸರ್ಕಾರಿ ಶಾಲೆ ಶ್ರೇಯೋಭಿವೃದ್ಧಿ ಮತ್ತು ಶಾಲಾ ಉಳಿವಿಗಾಗಿ ಕಳೆದ 30 ವರ್ಷಗಳಿಂದ ತನ್ನ ಕೈಲಾದಷ್ಟು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳ ನೆರವು ನೀಡುತ್ತಾ ಬಂದಿದ್ದೇನೆ. ಸೇವೆ ಮಾಡುವುದರಲ್ಲಿ ನನಗೆ ಶಾಂತಿ, ನೆಮ್ಮದಿ ಜತೆಗೆ ಆತ್ಮಸಂತೃಪ್ಪಿ ಸಿಕ್ಕಿದೆ. ಇದಕ್ಕಿಂತ ಸಮಾಜದಲ್ಲಿ ವ್ಯಕ್ತಿಗತ ಮೌಲ್ಯ ಬೇರೆ ಯಾವುದೂ ಸಿಗಲಾರದು ಎಂದರು.
ಬಡವ, ದುರ್ಬಲ, ಅಸಹಾಯಕರಾದ ಮಕ್ಕಳು ಸಮಾಜದಲ್ಲಿ ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಜೀವನದಲ್ಲಿ ಮೇಲೆ ಬರಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಎರವಾಗಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ರಾಮಯ್ಯ, ನಂಜಮ್ಮ, ಕುಟುಂಬದಿಂದ ಎಲ್ಲ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಮುಖ್ಯ ಶಿಕ್ಷಕ ವೆಂಟೇಶಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಶಾಂತರಾಜು ಮತ್ತು ಶಾಲಾಭಿವೃದ್ಧಿ ಸಮಿತಿಯ ನಟರಾಜು, ಸಿಆರ್.ಪಿ.ಮಿಹಿರ್ ಕುಮಾರ್, ರೇಷ್ಮೆ ಇಲಾಖೆಯ ವರದರಾಜು, ಗ್ರಾಮಸ್ಥರಾದ ಸತೀಶ್ಕುಮಾರ್, ಶಂಕರಪ್ಪ ಇದ್ದರು.