ತುಮಕೂರು: ಸಿದ್ಧಗಂಗಾ ಸ್ವಾಮೀಜಿ ಅವರ ಕ್ರಿಯಾ ಸಮಾಧಿಯ ವಿಧಿ ವಿಧಾನ ವೀಕ್ಷಿಸಲು ಬಂದಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್,ತುಮಕೂರಿನಈ ಹಿಂದಿನ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಅವರನ್ನು ನಿಂದಿಸಿದ್ದು, ಈ ವೇಳೆ ಅವರು ಕಣ್ಣೀರಿಟ್ಟಿದ್ದಾರೆ.ಇದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಕ್ರಿಯಾ ಸಮಾಧಿಯ ಭವನ ಪ್ರವೇಶಿಸಲು ಮುಂದಾದ ಸಮಯದಲ್ಲಿ ದಿವ್ಯಾ ಗೋಪಿನಾಥ್ ಸಚಿವರನ್ನು ತಡೆದಿದ್ದಾರೆ. ಆಗ ಸಚಿವರು ಅವರನ್ನು ನಿಂದಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಸಚಿವರ ಈ ನಡೆಯನ್ನು ಹಲವು ಮಂದಿ ಟೀಕಿಸಿದ್ದಾರೆ.
ಎಸ್ಪಿ ಆಗಿದ್ದ ದಿವ್ಯಾ ಗೋಪಿನಾಥ್ ಅವರು ಕಳೆದ 15 ದಿನಗಳ ಹಿಂದೆ ವರ್ಗಾವಣೆಯಾಗಿದ್ದು ಈಗ ರಜೆಯಲ್ಲಿ ಇದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ದಿವ್ಯಾ ಗೋಪಿನಾಥ್, ‘ಗದ್ದುಗೆಯ ಸ್ಥಳ ಚಿಕ್ಕದಾಗಿತ್ತು. ಒಳಗೆ ಯಾರು ಯಾರನ್ನು ಬಿಡಬೇಕು ಅಲ್ಲಿಗೆ ಯಾರು ಹೋಗಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಲಾಗಿತ್ತು. ನಮ್ಮ ಕರ್ತವ್ಯ ಏನಿರುತ್ತದೆಯೋ ಅದನ್ನು ನಾವು ಮಾಡುತ್ತೇವೆ’ ಎಂದರು.
‘ಸಚಿವರನ್ನತಡೆದಿದ್ದು ನಿಜ. ಅವರು ಸಚಿವರು ಎಂದು ತಿಳಿದ ಮೇಲೆ ಒಳಗೆ ಬಿಟ್ಟೆವು. ಅವರು ಅಷ್ಟರಲ್ಲಿ ಸ್ವಲ್ಪ ಜೋರಾಗಿ ಮಾತನಾಡಿದ್ದರು. ಲಕ್ಷಾಂತರ ಜನರು ಬರುವಾಗ ಕೆಲವರಿಗೆ ತೊಂದರೆಗಳು ಆಗುತ್ತವೆ. ಎಲ್ಲರ ಹಿತದೃಷ್ಟಿಯಿಂದ ಒಳ್ಳೆಯದು ಆಗಲಿ ಎಂದು ನಾವು ಚಿಂತಿಸುತ್ತೇವೆ’ ಎಂದು ನುಡಿದರು.
‘ಗದ್ದುಗೆಯಲ್ಲಿ ಎಲ್ಲರೂ ಹೋಗಲು ಸಾಧ್ಯವಿಲ್ಲ. ಸಾಕಷ್ಟು ಜನರು ಬಂದಿದ್ದರು. ಇಂತಹ ಸಮಯದಲ್ಲಿ ದೊಡ್ಡವರ ಬಂದೋಬಸ್ತ್ನಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಆಗುತ್ತವೆ. ಯಾವುದೇ ವಿವಾದಗಳು ಇಲ್ಲ’ ಎಂದು ಪ್ರತಿಕ್ರಿಯಿಸಿದರು.
ಮಹೇಶ್ ಸಮರ್ಥಿಸಿದ ಎಚ್ಡಿಕೆ
ಮಂತ್ರಿಗಳನ್ನೇ ಅವಮಾನಿಸಿದರೆ ಅದು ನನ್ನನ್ನೂ ಅವಮಾನಿಸಿದಂತೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ದಿವ್ಯಾ ಗೋಪಿನಾಥ್ ಅವರಿಗೆ ಮಹೇಶ್ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಸಿದ್ದಗಂಗಾ ಶ್ರೀಗಳ ಅಂತ್ಯಸಂಸ್ಕಾರದ ವೇಳೆ ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಎಂತೆಂಥವರನ್ನೋ ಒಳಗೆ ಬಿಟ್ಟಿದ್ದಾರೆ. ನಮ್ಮ ಸಚಿವರನ್ನು ಒಳಗೆ ಬಿಟ್ಟಿಲ್ಲ. ಅಧಿಕಾರಿಗಳು ತಪ್ಪು ಮಾಡಿದಾಗ ಅವರಿಗೆ ತಿದ್ದಿ ಹೇಳಬೇಕು. ಮಹೇಶ್ ಹಾಗೆ ಹೇಳಿದ್ದಾರೆ’ ಎಂದು ಹೇಳಿದರು.