ತುಮಕೂರು: ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ಗಗನಮುಟ್ಟಿದ್ದ ಹಣ್ಣಿನ ಬೆಲೆ ನಿಧಾನವಾಗಿ ಇಳಿಕೆಯಾಗುತ್ತಿದ್ದು, ಹಬ್ಬದ ನಂತರ ಹೂವು ಕೇಳುವವರೇ ಇಲ್ಲವಾಗಿದ್ದಾರೆ. ಕೆಲವು ತರಕಾರಿಗಳು, ಸೊಪ್ಪು ದರ ಅಲ್ಪ ಏರಿಕೆ ಕಂಡಿದ್ದು, ಬೇಳೆಕಾಳು, ಧಾನ್ಯ ಹಾಗೂ ಕೋಳಿ ಮಾಂಸದ ಧಾರಣೆ ಸ್ವಲ್ಪ ಕಡಿಮೆಯಾಗಿದೆ.
ಟೊಮೆಟೊ ಅಲ್ಪ ಏರಿಕೆ: ಗಗನಮುಟ್ಟಿ ಪಾತಾಳ ತಲುಪಿದ್ದ ಟೊಮೆಟೊ ಬೆಲೆ ಈ ವಾರ ಅಲ್ಪ ಏರಿಕೆ ಕಂಡಿದ್ದು, ಕೆ.ಜಿ ₹30–40ಕ್ಕೆ ತಲುಪಿದೆ. ಬೀನ್ಸ್ ಕೂಡ ಏರಿಕೆಯತ್ತ ಮುಖ ಮಾಡಿದ್ದು, ಗೆಡ್ಡೆಕೋಸು, ಎಲೆಕೋಸು ದರ ಚೇತರಿಸಿದೆ. ಕ್ಯಾರೇಟ್, ಬೀಟ್ರೂಟ್, ಈರುಳ್ಳಿ, ಹೂ ಕೋಸು, ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ ಮತ್ತಷ್ಟು ಅಗ್ಗವಾಗಿದೆ. ದುಬಾರಿಯಾಗಿರುವ ಶುಂಠಿ ಧಾರಣೆ ಸದ್ಯಕ್ಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಸೌತೆಕಾಯಿ, ನಿಂಬೆ ಹಣ್ಣಿನ ಬೆಲೆ ಏರುತ್ತಿಲ್ಲ.
ಮಾರುಕಟ್ಟೆಯಲ್ಲಿ ಆವಕ ಹೆಚ್ಚಿದ್ದರಿಂದ ತರಕಾರಿಗಳ ಬೆಲೆ ಇಳಿಕೆಯತ್ತಲೇ ಸಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ಮಳೆ ಇಲ್ಲದೆ ಬೆಳೆ ಒಣಗುತ್ತಿದೆ. ಕೊಳವೆ ಬಾವಿಗಳಲ್ಲೂ ನೀರಿನ ಮಟ್ಟ ಕಡಿಮೆಯಾಗಿದ್ದು, ಇರುವ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಕಷ್ಟಕರವಾಗಿದೆ. ಮುಂದಿನ ದಿನಗಳಲ್ಲಿ ಆವಕ ಕಡಿಮೆಯಾದರೆ ಬೆಲೆ ಹೆಚ್ಚಳವಾಗಬಹುದು ಎಂದು ಹೇಳಲಾಗುತ್ತಿದೆ.
ಸೊಪ್ಪು ಚೇತರಿಕೆ: ಇಳಿಕೆಯತ್ತಲೇ ಮುಖ ಮಾಡಿದ್ದ ಸೊಪ್ಪು, ಈ ವಾರ ಸ್ವಲ್ಪ ಮಟ್ಟಿಗೆ ಬೇಡಿಕೆ ಕಂಡುಕೊಂಡಿದೆ. ಸಬ್ಬಕ್ಕಿ, ಮೆಂತ್ಯ ಸೊಪ್ಪಿನ ದರ ಅಲ್ಪ ಏರಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20–25, ಸಬ್ಬಕ್ಕಿ ಕೆ.ಜಿ ₹25–30, ಮೆಂತ್ಯ ಕೆ.ಜಿ ₹30–40, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರಾಟವಾಗುತ್ತಿದೆ.
ಹಣ್ಣು ದುಬಾರಿ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ದುಬಾರಿಯಾಗಿದ್ದ ಹಣ್ಣುಗಳು, ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ಗಗನಮುಖಿಯಾಗಿದ್ದವು. ಸೇಬು ಒಮ್ಮೆಲೆ ಕೆ.ಜಿಗೆ ₹100ಕ್ಕೂ ಹೆಚ್ಚು ಹೆಚ್ಚಳವಾಗಿತ್ತು. ಏಲಕ್ಕಿ ಬಾಳೆಹಣ್ಣು ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ದಾಳಿಂಬೆ, ಇತರೆ ಹಣ್ಣುಗಳು ಇದೇ ದಾರಿಯಲ್ಲಿ ಸಾಗಿದ್ದವು. ಹಬ್ಬದ ಮರು ದಿನವೇ ಹಣ್ಣುಗಳ ಬೆಲೆ ಸಾಕಷ್ಟು ಕಡಿಮೆಯಾಗಿದೆ. ಹಬ್ಬದ ಸಮಯ ಹಾಗೂ ಬೇಡಿಕೆ ನೋಡಿಕೊಂಡು ಕೃತಕವಾಗಿ ಹಣ್ಣುಗಳ ಬೆಲೆ ಏರಿಕೆ ಮಾಡಿ ವರ್ತಕರು ಲಾಭ ಮಾಡಿಕೊಂಡರು. ಬೆಳೆಗಾರರು, ಗ್ರಾಹಕರಿಗೆ ಇದರಿಂದ ಅನುಕೂಲ ಆಗಲಿಲ್ಲ. ಏನಿದ್ದರೂ ವ್ಯಾಪಾರಿಗಳಿಗೆ ಅನುಕೂಲವಾಯಿತು ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಅಡುಗೆ ಎಣ್ಣೆ: ಅಡುಗೆ ಎಣ್ಣೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಆದರೆ ಕಡಲೆಕಾಯಿ ಎಣ್ಣೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಗೋಲ್ಡ್ವಿನ್ನರ್ ಕೆ.ಜಿ ₹112, ಪಾಮಾಯಿಲ್ ಕೆ.ಜಿ ₹88, ಕಡಲೆಕಾಯಿ ಎಣ್ಣೆ ಕೆ.ಜಿ ₹155ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಬೇಳೆ ಅಲ್ಪ ಇಳಿಕೆ: ಬೇಳೆ ಕಾಳುಗಳು, ಧಾನ್ಯಗಳ ಧಾರಣೆ ಕಡಿಮೆಯಾದಂತೆ ಕಾಣುತ್ತಿದೆ. ತೊಗರಿಬೇಳೆ ಕೆ.ಜಿಗೆ ₹10 ಕಡಿಮೆಯಾಗಿದ್ದು, ಕಡಲೆಬೇಳೆ, ಉದ್ದಿನಬೇಳೆ, ಅಲಸಂದೆ, ಕಡಲೆ ಬೀಜ ದರ ಕೊಂಚ ಇಳಿದಿದೆ. ಕಡಲೆಕಾಳು, ಹುರಿಗಡಲೆ ಮತ್ತೆ ಏರಿಕೆಯಾಗಿದೆ. ಉಳಿದಂತೆ ಯಥಾಸ್ಥಿತಿ ಮುಂದುವರಿದಿದೆ.
ಕಾಳುಮೆಣಸು ಇಳಿಕೆ: ದುಬಾರಿಯಾಗಿದ್ದ ಕಾಳುಮೆಣಸಿನ ದರ ಕಡಿಮೆಯಾಗಿದ್ದು, ಒಂದೇ ವಾರದಲ್ಲಿ ಕೆ.ಜಿ ₹100 ಇಳಿದಿದೆ. ಜೀರಿಗೆ, ಧನ್ಯ, ಬ್ಯಾಡಗಿ ಮೆಣಸಿನಕಾಯಿ, ಗೌರಿಬಿದನೂರು ಮೆಣಸಿನಕಾಯಿ, ಬಾದಾಮಿ, ಗೋಡಂಬಿ, ದ್ರಾಕ್ಷಿ ಬೆಲೆ ಕಡಿಮೆಯಾಗಿದೆ. ಟೊಮೆಟೊ ಹಣ್ಣಿನ ದರ ಕಡಿಮೆಯಾಗಿ ಹುಣಸೆ ಹಣ್ಣಿನ ಬಳಕೆ ಕಡಿಮೆಯಾಗಿದ್ದರೂ ಧಾರಣೆ ಮಾತ್ರ ಮಾರುಕಟ್ಟೆಯಲ್ಲಿ ಕಡಿಮೆಯಾಗಿಲ್ಲ.
ಧನ್ಯ ಕೆ.ಜಿ ₹100–140, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹560–580, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹255–275, ಹುಣಸೆಹಣ್ಣು ₹100–180, ಕಾಳುಮೆಣಸು ಕೆ.ಜಿ ₹560–600, ಜೀರಿಗೆ ಕೆ.ಜಿ ₹680–700, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹95–100, ಚಕ್ಕೆ ಕೆ.ಜಿ ₹265–285, ಲವಂಗ ಕೆ.ಜಿ ₹1,100–1,150, ಗುಣಮಟ್ಟದ ಗಸಗಸೆ ಕೆ.ಜಿ ₹1,350–1,400, ಬಾದಾಮಿ ಕೆ.ಜಿ ₹650–670, ಗೋಡಂಬಿ ಕೆ.ಜಿ ₹580–620, ದ್ರಾಕ್ಷಿ ಕೆ.ಜಿ ₹210–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಅಲ್ಪ ಇಳಿಕೆ: ಕಳೆದ ಎರಡು ವಾರದಿಂದಲೂ ಕೋಳಿ ಮಾಂಸದ ದರ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹210, ಸ್ಕಿನ್ಲೆಸ್ ಕೆ.ಜಿ ₹230, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಇಳಿಕೆಯಾಗಿದೆ.
ಮೀನು ಕಡಿಮೆ: ಮಾರುಕಟ್ಟೆಗೆ ಸಮುದ್ರ ಮೀನಿನ ಆವಕ ಹೆಚ್ಚಾಗುತ್ತಿದ್ದು ಧಾರಣೆ ಕಡಿಮೆಯಾಗಿದೆ. ಬಂಗುಡೆ ಕೆ.ಜಿ ₹250, ಬೂತಾಯಿ ಕೆ.ಜಿ ₹340, ಬೊಳಿಂಜರ್ ₹210, ಅಂಜಲ್ ಕೆ.ಜಿ ₹800, ಬಿಳಿ ಮಾಂಜಿ ಕೆ.ಜಿ 900, ಕಪ್ಪುಮಾಂಜಿ ಕೆ.ಜಿ ₹800, ಸೀಗಡಿ ಕೆ.ಜಿ ₹770, ಏಡಿ ಕೆ.ಜಿ ₹500ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.
******
ಪಟ್ಟಿ.....
ಹಣ್ಣು (ಬೆಲೆ ಕೆ.ಜಿ ₹)
ಸೇಬು;120–180
ದಾಳಿಂಬೆ;150–180
ಮೂಸಂಬಿ;80
ಕಿತ್ತಳೆ;140–200
ಸಪೋಟ;120
ಏಲಕ್ಕಿ ಬಾಳೆ;115
ಪಚ್ಚಬಾಳೆ;50
ಸೀಬೆ;80–100
ಪೈನಾಪಲ್;80–100
ಪಪ್ಪಾಯ;50
ಕರಬೂಜ;60
ಕಲ್ಲಂಗಡಿ;40
ದ್ರಾಕ್ಷಿ;160
******
ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)
ತೊಗರಿ ಬೇಳೆ;140–150
ಕಡಲೆ ಬೇಳೆ;75–80
ಉದ್ದಿನ ಬೇಳೆ;125–130
ಹೆಸರು ಬೇಳೆ;105–110
ಕಡಲೆಕಾಳು;74–78
ಹೆಸರು ಕಾಳು;110–115
ಅಲಸಂದೆ;105–110
ಅವರೆಕಾಳು;155–160
ಅವರೆಬೇಳೆ;195–200
ಹುರುಳಿಕಾಳು;100–105
ಹುರಿಗಡಲೆ;95–100
ಬಟಾಣಿ;95–100
ಕಡಲೆ ಬೀಜ;130–135
ಗೋಧಿ;36–42
ಸಕ್ಕರೆ;39–40
**
ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)
ಬೀನ್ಸ್;30–40
ಕ್ಯಾರೇಟ್;30–40
ಬೀಟ್ರೂಟ್;25–30
ಈರುಳ್ಳಿ;25–30
ಟೊಮೆಟೊ;30–40
ಆಲೂಗಡ್ಡೆ;25–30
ಗೆಡ್ಡೆಕೋಸು;25–30
ಮೂಲಂಗಿ;20–25
ಬೆಂಡೆಕಾಯಿ;15–20
ಬದನೆಕಾಯಿ;15–20
ಎಲೆಕೋಸು;20–25
ಹೂಕೋಸು(1ಕ್ಕೆ);20
ತೊಂಡೆಕಾಯಿ;25–30
ಹಾಗಲಕಾಯಿ;30–40
ನಗ್ಗೆಕಾಯಿ;40–50
ಮೆಣಸಿನಕಾಯಿ;40–50
ಕ್ಯಾಪ್ಸಿಕಂ;40–50
ಶುಂಠಿ;100–120
ಸೌತೆಕಾಯಿ 1ಕ್ಕೆ;4–5
ನಿಂಬೆಹಣ್ಣು 1ಕ್ಕೆ;1–2
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.