ಚೇಳೂರು: ಸಮ್ಮಿಶ್ರ ಸರ್ಕಾರ 2019 ಫೆಬ್ರುವರಿ 8 ರಂದು ಚೇಳೂರು ತಾಲ್ಲೂಕು ಎಂದುಘೋಷಣೆ ಮಾಡಿ ಒಂದುವರೆ ವರ್ಷವಾದರೂ ಗಡಿ ಗುರುತು ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಹಾಗಾಗಿ ಆಗಸ್ಟ್ 15 ರಂದು ಚೇಳೂರು ನಾಡ ಕಚೇರಿ ಮುಂದೆ ಕಪ್ಪು ಪಟ್ಟಿಧರಿಸಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಚೇಳೂರು ತಾಲ್ಲೂಕು ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಚೇಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪೂರ್ವ ಭಾವಿ ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ಪಿ.ರಾಧಾಕೃಷ್ಣ ಮಾತನಾಡಿ, ‘ಚೇಳೂರು ತಾಲ್ಲೂಕು ಎಂದು ಘೋಷಣೆಯಾದ ಕೆಲವೇ ದಿನಗಳ ನಂತರ ಸಮ್ಮಿಶ್ರ ಸರ್ಕಾರ ಪತನವಾಗುವ ಜತೆಗೆ ಜಿಲ್ಲಾಧಿಕಾರಿ ಸಹ ವರ್ಗಾವಣೆ ಆದರು. ನಂತರ ಬಂದ ಜಿಲ್ಲಾಧಿಕಾರಿಯೂ ಗಡಿ ಗುರುತಿಸಿಲ್ಲ’ ಎಂದು ದೂರಿದರು.
ಜಿಲ್ಲಾಡಳಿತದ ವಿಳಂಬ ನೀತಿಯ ವಿರುದ್ಧ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಲು ತೀರ್ಮಾನಿಸಿದ್ದೇವೆ. ನಮ್ಮ ಹೋರಾಟಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ವಾಲ್ಮೀಕಿ ನಾಯಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಪಕ್ಷ, ಜಾತಿ ಬೇಧ ಮರೆತು ಎಲ್ಲ ವರ್ಗದ ಜನರು ಹಾಗೂ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಒಗ್ಗಟ್ಟಾಗಿ ಕಪ್ಪು ಪಟ್ಟಿಧರಿಸಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕದ್ದೀಲು ವೆಂಕಟರವಣ ವಾಲ್ಮೀಕಿ ನಾಯಕ ಸಂಘದ ಮುಖಂಡ ಟಿ.ಎನ್.ಶೀನಪ್ಪ, ಚೇಳೂರು ತಾಲ್ಲೂಕು ಹೋರಾಟ ಸಮಿತಿ ಸದಸ್ಯ ಭೂಪಾಳಂ,ಜಗನ್ನಾಥಯ್ಯ ಶೆಟ್ಟಿ, ಜ್ಯೋ.ವೆಂ.ಚಲಪತಿ, ಕೆ.ವಿ.ಶ್ರೀನಿವಾಸರೆಡ್ಡಿ, ವೈ.ಶಂಕರಪ್ಪ, ಡಿ.ವೆಂಕಟರವಣ ಮತ್ತಿತರಿದ್ದರು.