ತುಮಕೂರು: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಅಥುಲ್ ಕುಮಾರ್ ಅಲಿಯಾಸ್ ಮಧುಗಿರಿ ಮೋದಿ ಎಂಬಾತನನ್ನು ನೇಣಿಗೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನೇತೃತ್ವದಲ್ಲಿ ಮುಸ್ಲಿಮರು ಟೌನ್ಹಾಲ್ ವೃತ್ತದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ಮಧುಗಿರಿ ಮೋದಿ ಎಂಬ ವ್ಯಕ್ತಿಯು ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿರುವುದು ಮುಸ್ಲಿಂ ಧರ್ಮವನ್ನು ಕೆರಳಿಸಿದೆ. ಇಂತಹ ವ್ಯಕ್ತಿಗಳಿಂದ ಸಮಾಜದ ಸ್ವಾಸ್ಥ್ಯ ಹಾಳುಗುತ್ತದೆ. ಹಾಗಾಗಿ ಆತನನ್ನು ನೇಣಿಗೆ ಹಾಕುವ ಮೂಲಕ ಮುಸ್ಲಿಂ ಸಮಾಜಕ್ಕೆ ಜಯ ತಂದುಕೊಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಮಧುಗಿರಿ ಮೋದಿಯ ಹೇಳಿಕೆಯು ಹಿಂದೂ ಮತ್ತು ಮುಸ್ಲಿಂ ಸಹೋದರರಲ್ಲಿ ಮನಸ್ತಾಪ ಉಂಟಾಗುವುದಕ್ಕೆ ದಾರಿಯಾಗುತ್ತದೆ. ಈತನ ಹೇಳಿಕೆಯು ದುರುದ್ದೇಶದಿಂದ ಕೂಡಿದೆ. ಈತ ಯಾವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾನೆ ಹಾಗೂ ಈತನ ಹಿಂದೆ ಯಾವ ಕಾಣದ ಕೈಗಳು ಕೆಲಸಮಾಡಿವೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್, ಮುಜೀಬ್ ಮಹಮ್ಮದ್, ಸಯ್ಯದ್, ರಫೀಕ್, ಮುಜೀಬ್, ಇರ್ಫಾನ್, ಹಿದಾಯತ್, ಹುಸೇನ್ ಮತ್ತಿತರರಿದ್ದರು.
ಮೋದಿ ವಿರುದ್ಧ ಪ್ರಕರಣ ದಾಖಲು
ಅಥುಲ್ ಕುಮಾರ್ ಅಲಿಯಾಸ್ ಮಧುಗಿರಿ ಮೋದಿ ಎಂಬಾತನ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಆತನ ಬಂಧನಕ್ಕೆ ಕ್ರಮ ವಹಿಸಲಾಗಿದೆ. ಅಲ್ಲದೆ, ಈತನ ಫೇಸ್ಬುಕ್ ಖಾತೆ ವಾಜಗೊಳಿಸಲು ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದರು.