ತುಮಕೂರು: ಸರ್ಕಾರ ಒಂದು ಕಡೆ ಮಹಿಳೆಯರ ಸಬಲೀಕರಣ ಮಾಡುತ್ತಲೇ ಮತ್ತೊಂದು ಕಡೆ 1 ಸಾವಿರ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಸರಿಯಲ್ಲ ಎಂದು ಲೇಖಕಿ ಬಾ.ಹ.ರಮಾಕುಮಾರಿ ಹೇಳಿದರು.
ಸರ್ಕಾರ 1 ಸಾವಿರ ಮದ್ಯದಂಗಡಿ ತೆರೆಯಲು ಮುಂದಾಗಿರುವುದನ್ನು ಖಂಡಿಸಿ ನಗರದಲ್ಲಿ ಶನಿವಾರ ಸರ್ವೋದಯ ಮಹಾ ಮಂಡಲ, ಸಿಐಟಿಯು, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ‘ಯುವ ಜನತೆ ಕುಡಿತದಿಂದ ತಮ್ಮ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಸರ್ಕಾರ ಈ ತೀರ್ಮಾನ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಶಾಲಾ-ಕಾಲೇಜು, ಆಸ್ಪತ್ರೆ, ಉದ್ಯೋಗ ಸೃಷ್ಟಿಸಬೇಕು. ಆದರೆ ಸರ್ಕಾರ ಈ ರೀತಿ ಮದ್ಯದಂಗಡಿ ತೆರೆಯಲು ಹೊರಟಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ವೈ.ಎಚ್,ಹುಚ್ಚಯ್ಯ, ವಿವಿಧ ಸಂಘಗಳ ಪದಾಧಿಕಾರಿಗಳಾದ ಕಲ್ಪನಾ, ಚಂದ್ರಕಲಾ, ಕಲ್ಯಾಣಿ, ಸಿ.ಯತಿರಾಜು, ಎಂ.ಬಸವಯ್ಯ, ಪುಟ್ಟಕಾಮಣ್ಣ, ಬಿ.ಉಮೇಶ್, ಎನ್.ಕೆ.ಸುಬ್ರಮಣ್ಯ, ಚಂದ್ರಶೇಖರ್, ಸೈಯದ್ ಮುಜೀಬ್, ಎ.ಲೊಕೇಶ್, ಪಾರ್ವತಮ್ಮ, ರಾಣಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.