ತುಮಕೂರು: ‘ಈ ದೇಶ ನಮಗೆ ಮಾತ್ರ ಇರಬೇಕು. ಯಾರು ಬೇಕಾದರೂ ಬಂದು ಹೋಗಲು ಭಾರತವೇನು ತೋಟದಪ್ಪನ ಛತ್ರವೇ’ ಎಂದು ಕಂದಾಯ ಸಚಿವ ಆರ್.ಅಶೋಕ ಪ್ರಶ್ನಿಸಿದರು.
ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ನಗರದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಸುಮಾರು 2 ಕೋಟಿ ಜನರು ಭಾರತಕ್ಕೆ ಬಂದು ವಾಸಿಸುತ್ತಿದ್ದಾರೆ. ಆ ದೇಶಗಳಿಂದ ಬಂದು ನಮ್ಮಲ್ಲಿ ನೆಲೆಸಿದ ಕಾರಣ ಮುಂದೊಂದು ದಿನ ನಮ್ಮ ಮಕ್ಕಳಿಗೆ ವಾಸಿಸಲು ಮನೆ, ಊಟ, ವಿದ್ಯಾಭ್ಯಾಸ ಸಿಗದಂತಹ ಪರಿಸ್ಥಿತಿ ಸೃಷ್ಟಿ ಆಗುವ ಆತಂಕ ಇದೆ’ ಎಂದರು.
ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ದೇಶ ವಿಭಜನೆಯ ನಂತರ ಹಿಂದೂಗಳನ್ನು ಅಲ್ಲಿ ಕೀಳಾಗಿ ಕಾಣಲಾಗುತ್ತಿದೆ. ಆ ನೋವು, ದಬ್ಬಾಳಿಕೆ ತಾಳದೆ ಭಾರತಕ್ಕೆ ಬಂದಿದ್ದಾರೆ. ಯಾವುದೇ ಪೌರತ್ವ ಇಲ್ಲದೆ 40 ವರ್ಷಗಳಿಂದ ಟೆಂಟ್ಗಳಲ್ಲಿ ವಾಸಿಸುತ್ತಿದ್ದಾರೆ. ಇಂತಹವರಿಗೆ ಪೌರತ್ವ ನೀಡಲಾಗುತ್ತದೆ ಎಂದರು.
ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಅನ್ಯದೇಶಗಳಿಂದ ಯಾರೂ ಬರುವಂತಿಲ್ಲ ಅಷ್ಟೇ. ಹೀಗಿರುವಾಗ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.