ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮೊಳಗಿದ ಜೈ ಶ್ರೀರಾಮ್ ಘೋಷಣೆ

ಎಲ್ಲೆಡೆ ರಾಮ ನಾಮ ಜಪ, ದೇಗುಲಗಳಲ್ಲಿ ವಿಶೇಷ ಪೂಜೆ
Published 18 ಏಪ್ರಿಲ್ 2024, 5:58 IST
Last Updated 18 ಏಪ್ರಿಲ್ 2024, 5:58 IST
ಅಕ್ಷರ ಗಾತ್ರ

ತುಮಕೂರು: ಶ್ರೀರಾಮ ನವಮಿ ಪ್ರಯುಕ್ತ ಬುಧವಾರ ನಗರದ ಎಲ್ಲೆಡೆ ಶ್ರೀರಾಮ ನಾಮ ಜಪಿಸಲಾಯಿತು. ವಿವಿಧ ದೇವಸ್ಥಾನಗಳು, ಪ್ರಮುಖ ರಸ್ತೆ, ವೃತ್ತಗಳಲ್ಲಿ ಜೈ ಶ್ರೀರಾಮ್‌ ಘೋಷಣೆಗಳು ಮೊಳಗಿದವು. ರಾಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.

ಬಿ.ಎಚ್‌.ರಸ್ತೆ, ಎಂ.ಜಿ.ರಸ್ತೆ, ಬಾರ್‌ಲೈನ್‌ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಶಾಮಿಯಾನ ಹಾಕಿ, ರಾಮ– ಸೀತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಯಿತು. ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು. ಬಿ.ಜಿ.ಎಸ್‌ ವೃತ್ತ, ಬಟವಾಡಿ, ಶೆಟ್ಟಿಹಳ್ಳಿ, ಕೋಟೆ ಆಂಜನೇಯ ದೇವಾಲಯ, ಆದರ್ಶ ನಗರದ ಸಾಯಿಬಾಬಾ ದೇವಸ್ಥಾನ, ಶ್ರೀರಾಮ ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತು.

ಶ್ರೀರಾಮ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು. ಸಾರ್ವಜನಿಕರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಚಿಕ್ಕಪೇಟೆಯ ವಾಸವಿ ಪ್ರಾರ್ಥನಾ ಮಂದಿರದಲ್ಲಿ ಆರ್ಯ ವೈಶ್ಯ ಮಂಡಳಿ, ಆರ್ಯವೈಶ್ಯ ಶ್ರೀರಾಮ ಸೇವಾ ಸಮಿತಿಯಿಂದ ಹಲವು ಧಾರ್ಮಿಕ ಕೈಂಕರ್ಯಗಳನ್ನು ಏರ್ಪಡಿಸಲಾಗಿತ್ತು.

ಅಭಿಷೇಕ, ಗಣಪತಿ ಪೂಜೆ, ಶ್ರೀರಾಮ ತಾರಕ ಹೋಮ ಜರುಗಿತು. ಶ್ರೀರಾಮ ನವಮಿ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ, ಶ್ರೀರಾಮ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಸಂಜೆ ಸೀತಾರಾಮ ಕಲ್ಯಾಣ ಹಾಗೂ ಶ್ರೀರಾಮ ಪಟ್ಟಾಭಿಷೇಕ ನೆರವೇರಿತು. ಮಹಾಲಕ್ಷ್ಮಿ ನಗರದ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲೂ ಶ್ರೀರಾಮ ನವಮಿ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ನಡೆದವು.

ಕೆಲವು ಕಡೆಗಳಲ್ಲಿ ಮುಸ್ಲಿಮರು ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿಸಿಲಿನಿಂದ ಧಣಿದು ಬಂದವರಿಗೆ ಮಜ್ಜಿಗೆ, ನೀರು ವಿತರಿಸಿದರು. ಸೌಹಾರ್ದತೆಯ ಸಂದೇಶ ಸಾರಿದರು. ವಿವಿಧೆಡೆ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪಾಲ್ಗೊಂಡಿದ್ದರು. ಮುಸ್ಲಿಂ ಮುಖಂಡರೂ ಜತೆಯಲ್ಲಿದ್ದರು.

ತುಮಕೂರಿನ ಕೆ.ಆರ್.ರಸ್ತೆಯ ಶ್ರೀರಾಮ ದೇವಸ್ಥಾನದಲ್ಲಿ ಬುಧವಾರ ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು
ತುಮಕೂರಿನ ಕೆ.ಆರ್.ರಸ್ತೆಯ ಶ್ರೀರಾಮ ದೇವಸ್ಥಾನದಲ್ಲಿ ಬುಧವಾರ ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು
ತುಮಕೂರಿನ ಬಟವಾಡಿ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮಜ್ಜಿಗೆ ವಿತರಿಸಿದರು. ಮುಖಂಡರಾದ ರಫಿಕ್‌ ಅಹ್ಮದ್‌ ಇಕ್ಬಾಲ್‌ ಅಹ್ಮದ್‌ ನಯಾಜ್‌ ಅಹ್ಮದ್‌ ಹಾಜರಿದ್ದರು
ತುಮಕೂರಿನ ಬಟವಾಡಿ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮಜ್ಜಿಗೆ ವಿತರಿಸಿದರು. ಮುಖಂಡರಾದ ರಫಿಕ್‌ ಅಹ್ಮದ್‌ ಇಕ್ಬಾಲ್‌ ಅಹ್ಮದ್‌ ನಯಾಜ್‌ ಅಹ್ಮದ್‌ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT