ಹಾರೋಹಳ್ಳಿ: ‘ಸಂಸದ ಡಿ.ಕೆ. ಸುರೇಶ್ ನೇತೃತ್ಬದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ’ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಹಾರೋಹಳ್ಳಿ ತಾಲೂಕಿನ ಮೇಡಮಾರನಹಳ್ಳಿ ಗ್ರಾಮದಲ್ಲಿ ಬಿಡದಿ-ಹಾರೋಹಳ್ಳಿ ಮಾರ್ಗದ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ನಿರ್ಮಾಣ ಮಾಡಬೇಕೆಂಬುದು ಜನರ ಹಲವು ದಿನದ ಕೊರಗಾಗಿತ್ತು. ಇಂದು ಈಡೇರಿದೆ ಈ ಭಾಗದ ಜನರು ಈ ರಸ್ತೆ ನಿರ್ಮಿಸುವಂತೆ ಹಲವಾರು ಬಾರಿ ಹೇಳಿದ್ದರು. ಇದೀಗ ಜನರ ಅಭಿಲಾಷೆ ಈಡೇರುತ್ತಿದೆ ಎಂದರು.
‘ಈ ರಸ್ತೆ ನಿರ್ಮಾಣ ವಿಚಾರವಾಗಿ ಈ ಭಾಗದ ಜನರು ತುಂಬಾ ಬೈದಿದ್ದಾರೆ. ಒಂದಲ್ಲ ಎರಡಲ್ಲಿ ಈ ರಸ್ತೆ ಬಗ್ಗೆ 50 ಸಭೆಗಳಾಗಿವೆ. ಅಲ್ಲದೇ ರಸ್ತೆ ನಿರ್ಮಾಣ ಸಂಬಂಧ ಹಲವಾರು ಸಮಸ್ಯೆಗಳು ಎದುರಾಗಿದ್ದವು. ಇಂದು ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಲಾಗಿದೆ. ಇಂದು ಜನರ ಬೈಗುಳ ನಿಂತಿವೆ ಎಂದು ಅನಿಸುತ್ತಿದೆ’ ಎಂದರು.
‘ಸಂಸದರ ಶ್ರಮದಿಂದ ರಸ್ತೆಯಾಗುತ್ತಿದೆ. ₹ 200 ಕೋಟಿ ವೆಚ್ಚದ ಕೆಲಸ ಇದಾಗಿದೆ. ಮೂರು ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಎಲ್ಲಾ ರೀತಿಯಲ್ಲೂ ಕ್ಷೇತ್ರವನ್ನು ಅಭಿವೃಧ್ಧಿಪಡಿಸಲಾಗುವುದು’ ಎಂದರು
ಚುನಾವಣಾ ಸಮಯದಲ್ಲಿನ ಘಟನೆಗಳನ್ನು ಮೆಲುಕು ಹಾಕಿ ಶಾಸಕ ಇಕ್ಬಾಲ್, ಮೇಡಮಾರನಹಳ್ಳಿಯಲ್ಲಿ ಅತ್ತಿದ್ದೆ. ಅಂದು ಜನತೆ ಅಳಬೇಡಿ ನಾವಿದ್ದೇವೆ ನಿಮ್ಮನ್ನು ನಾವು ಗೆಲ್ಲಿಸುತ್ತೇವೆ ಎಂದು ಮತ ಆಶೀರ್ವಾದ ಮಾಡಿದ್ದರು. ಜನರ ಆಶೀರ್ವಾದದಿಂದ ನಾನಿಂದು ಶಾಸಕನಾಗಿದ್ದೇನೆ. ಜನತೆಯ ಋಣ ತೀರಿಸುವ ಕೆಲಸವನ್ನು ನಾವು ಮಾಡುತ್ತೇನೆ. ಸರ್ಕಾರ ಅನುದಾನವನ್ನು ಕ್ಷೇತ್ರಕ್ಕೆ ನೀಡಿ ಪಟ್ಟಣ ಸೇರಿದಂತೆ ಕ್ಷೇತ್ರದಾದ್ಯಂತ ಕೆಲಸಗಳು ನಡೆಯುತ್ತಿದೆ. ಜನತೆಗೆ ನಿವೇಶನವನ್ನು ನೀಡುವ ಕೆಲಸ ಮಾಡಲಾಗುವುದು. ಮನೆಯ ಜತೆಗೆ ಮೂಲಸೌಲಭ್ಯ ಒದಗಿಸುವ ಕೆಲಸ ಮಾಡಲಾಗುವುದು. ತಾಲೂಕಿನ ಪ್ರತಿ ಹಳ್ಳಿಗೂ ಕಾವೇರಿ ನೀರನ್ನು ಒದಗಿಸಲಾಗುವುದು. ಜನರ ಕಷ್ಟ ಸುಖಗಳನ್ನು ಕೇಳುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜು, ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಅಶೋಕ್, ಭುಜಂಗಯ್ಯ, ಮೂರ್ತಿ, ಮೇಡಮಾರನಹಳ್ಳಿ ಶಿವರಾಜು, ಸುರೇಶ್, ಸೊಂಟೇನಹಳ್ಳಿ ದಿನೇಶ್, ಶಶಿ ಭಾರ್ಗವ್, ಮೋಹನ್, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಆರ್ಐಡಿಎಲ್ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.