ತುಮಕೂರು: ತಾಲ್ಲೂಕಿನ ಕೌತಮಾರನಹಳ್ಳಿ ಬಳಿ ಮಂಗಳವಾರ ಕರ್ನಾಟಕ ಜಲ್ಲಿ ಕ್ರಷರ್ ಘಟಕದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಕಲ್ಲು ಬಂಡೆ ಉರುಳಿ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರ ಕಾಲು ಮುರಿದಿದೆ.
ಬಿಹಾರ ಮೂಲದ ಮೊಹಮ್ಮದ್ ಅಬೂಲ್ (29), ಛತ್ತೀಸಗಡ ಮೂಲದ ಮನು (25) ಮೃತಪಟ್ಟವರು. ಈರ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕ ಜಲ್ಲಿ ಕ್ರಷರ್ ಘಟಕದಲ್ಲಿ ಮಂಗಳವಾರ ಮಧ್ಯಾಹ್ನ ಕಲ್ಲು ಬಂಡೆಯನ್ನು ಸೀಳುತ್ತಿದ್ದ ಸಮಯದಲ್ಲಿ ಬಂಡೆ ಉರುಳಿ ಬಿದ್ದಿದೆ. ಕಲ್ಲು ಬಂಡೆ ಮೇಲೆ ನಿಂತು ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಲ್ಲಿನ ಅಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕ್ರಷರ್ ಮಾಲೀಕ ತಲೆ ಮರೆಸಿಕೊಂಡಿದ್ದಾರೆ.
ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.