ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಶಿಕ್ಷಕಿಯೊಬ್ಬರು ₹9.34 ಲಕ್ಷ ಕಳೆದುಕೊಂಡಿದ್ದಾರೆ.
ಕುವೆಂಪು ನಗರದ ನಿವಾಸಿ ಎನ್.ಸುಷ್ಮಾ ಅವರು ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಸುಷ್ಮಾ ಇನ್ಸ್ಟಾಗ್ರಾಮ್ ನೋಡುತ್ತಿದ್ದಾಗ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಒಂದು ಲಿಂಕ್ ಕಾಣಿಸಿದೆ. ಅದನ್ನು ಕ್ಲಿಕ್ ಮಾಡಿದ ತಕ್ಷಣಕ್ಕೆ ‘ಇ2 ಬ್ರಾಡ್ ಸೆಕ್ಯೂರಿಟಿ ಗ್ರೂಪ್’ ಎಂಬ ವಾಟ್ಸ್ ಆ್ಯಪ್ ಗ್ರೂಪ್ ಓಪನ್ ಆಗಿದೆ. ಅದರಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಕೆಲವರು ಮಾಹಿತಿ ಹಂಚಿಕೊಂಡಿದ್ದಾರೆ.
ನಂತರ ‘ವಿಐಪಿ–2’ ಎಂಬ ಗ್ರೂಪ್ಗೆ ಸುಷ್ಮಾ ಅವರನ್ನು ಸೇರಿಸಿದ್ದಾರೆ. ಸದರಿ ಗ್ರೂಪ್ನಲ್ಲಿ ಒಂದು ಲಿಂಕ್ ಕಳುಹಿಸಿದ್ದಾರೆ. ಲಿಂಕ್ ಓಪನ್ ಮಾಡಿ ಮೊಬೈಲ್ ನಂಬರ್, ಪಾಸ್ವಾರ್ಡ್ ಹಾಕಿ ಲಾಗಿನ್ ಆಗಿದ್ದಾರೆ. ಇದಾದ ಬಳಿಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಸುಷ್ಮಾ ಸೈಬರ್ ಕಳ್ಳರು ಹೇಳಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಏ. 8ರ ವರೆಗೆ ಹಂತ ಹಂತವಾಗಿ ₹9.34 ಲಕ್ಷ ವರ್ಗಾವಣೆ ಮಾಡಿದ್ದಾರೆ.
ಹೂಡಿಕೆ ಮಾಡಿದ ಹಣ ವಾಪಸ್ ಪಡೆಯಲು ಮುಂದಾದಾಗ ಅದು ಸಾಧ್ಯವಾಗಿಲ್ಲ. ಇದನ್ನು ಸುಷ್ಮಾ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಪ್ರಶ್ನಿಸಿದ್ದು, ಹಣ ವಾಪಸ್ ಪಡೆಯಲು ತೆರಿಗೆ ಹಣವಾಗಿ ₹3 ಲಕ್ಷ ಪಾವತಿಸುವಂತೆ ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.