ತುಮಕೂರು: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸೊಲೇಷನ್ ವಾರ್ಡ್ಗೆ ದಾಖಲಾಗಿದ್ದ ಇಲ್ಲಿನ ಸಿದ್ಧಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕೊರೊನಾ ಸೋಂಕು ತಗುಲಿಲ್ಲ.
ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಆಂಧ್ರಪ್ರದೇಶದ ಕರ್ನೂಲಿನ ವಿದ್ಯಾರ್ಥಿ ಇತ್ತೀಚೆಗೆ ರಾಯಚೂರು ಮೂಲಕ ಮಠಕ್ಕೆ ಮರಳಿ ಬಂದಿದ್ದ. ಆತನಿಗೆ ಕೊರೊನಾ ಸೋಂಕು ತಗುಲಿದೆ ಎನ್ನುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಗಂಟಲು ಸ್ರಾವ ಮತ್ತು ಕಫದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
‘ವಿದ್ಯಾರ್ಥಿ ಜತೆಯಲ್ಲಿದ್ದ ಐದು ಮಂದಿ ಮತ್ತು ಮಠದ 120 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಯಾರಲ್ಲೂ ಸೋಂಕು ತಗುಲಿಲ್ಲ’ ಎಂದು ಶನಿವಾರ ಸಂಜೆ ಮಠಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದರು.
‘ಯಾವುದೇ ವಿದ್ಯಾರ್ಥಿಯೂ ಗಾಬರಿಪಡಬಾರದು. ಮಠದ ಯಾರಲ್ಲೂ ಸೋಂಕು ತಗುಲಿಲ್ಲ’ ಎಂದು ಸಿದ್ಧಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದರು.