ತುಮಕೂರು: ‘ಸಮಾಜ ಎರಡು ಚಕ್ರಗಳ ರಥವಿದ್ದಂತೆ, ಒಂದು ಚಕ್ರ ಆರ್ಥಿಕ ಅಭಿವೃದ್ಧಿ ಸೂಚಿಸಿದರೆ ಇನ್ನೊಂದು ಚಕ್ರ ಪರಿಸರ ಅಭಿವೃದ್ಧಿಯನ್ನು ಹೇಳುತ್ತದೆ’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಡಾ.ಎಂ.ಕೆ.ರಮೇಶ್ ನುಡಿದರು.
ವಿದ್ಯೋದಯ ಕಾಲೇಜಿನಲ್ಲಿ ಸಿಜ್ಞಾ ಯುವ ಸಂವಾದ ಕೇಂದ್ರದ ಸಹಯೋಗದಲ್ಲಿ ನಡೆದ ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಕಾನೂನು ಮತ್ತು ಸರ್ಕಾರದ ನೀತಿಗಳ ಪಾತ್ರ ಸಂವಾದ ಉದ್ಘಾಟಿಸಿ ಮಾತನಾಡಿದರು.
ರಥ ಚಲಿಸಲು ಎರಡು ಚಕ್ರಗಳು ಎಷ್ಟು ಮುಖ್ಯವೋ ಹಾಗೆಯೇ ಸಮಾಜ ಮುಂದಕ್ಕೆ ಹೋಗಲು ಪರಿಸರ ಮತ್ತು ಆರ್ಥಿಕತೆಯ ಸಮಾನ ಬೆಳವಣಿಗೆ ಅಗತ್ಯ ಎಂದರು.
ಸರ್ಕಾರಗಳು ಎಲ್ಲ ಕಾಲಕ್ಕೆ ಸಲ್ಲುವ ಸುಸ್ಥಿರ ಅಭಿವೃದ್ಧಿ ಕಡೆಗೆ ಮುಖ ಮಾಡಬೇಕು. ಇದರಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಇನ್ನೊಬ್ಬರ ಅವಶ್ಯಕತೆಗಳನ್ನು ಕಿತ್ತುಕೊಂಡು ಬದುಕುವುದೇ ಕೆಲಸವಾಗಬಾರದು. ಸಾಮಾಜಿಕ ಹಿತವನ್ನು ಕಾಪಾಡಲು ಕಾನೂನು ಅವಶ್ಯ ಎಂದು ಹೇಳಿದರು.
ಇಂದು ಎಲ್ಲ ಸರಕಾರಗಳು ರೈತರನ್ನು ವ್ಯವಸ್ಥಿತವಾಗಿ ಕೊಲೆ ಮಾಡುತ್ತಿವೆ. ಜಾಗತಿಕ ಆರ್ಥಿಕತೆ ಕೆಲವೇ ಕೆಲವರು ಹಿಡಿತದಲ್ಲಿ ಇದೆ. ಭೂಮಿತ ಸುಸ್ಥಿರತೆ ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತ ನಗರಗಳ ಭಾರಕ್ಕೆ ಕುಸಿಯುತ್ತಿದೆ. ನಗರಗಳು ಮಲಿನಗೊಂಡು ಬದುಕಲು ಯೋಗ್ಯವಲ್ಲದ ಜಾಗಗಳಾಗಿ ಬದಲಾಗುತ್ತಿವೆ ಎಂದು ಸಿಜ್ಞಾ ಯುವ ಕೇಂದ್ರದ ನಿರ್ದೇಶಕ ಜ್ಞಾನ ಸಿಂಧೂ ಸ್ವಾಮಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯೋದಯ ಫೌಂಡೇಶನ್ ಟ್ರಸ್ಟಿಗಳಾದ ಎಚ್.ಎಸ್.ಶೇಷಾದ್ರಿ, ಪ್ರಾಂಶುಪಾಲರಾದ ಪ್ರೊ.ವೆಂಕಟಾಚಲಪತಿ ಸ್ವಾಮಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಮಂಜುಳಾ, ಮಂಜುನಾಥ್ ಇದ್ದರು.