ತುಮಕೂರು: ನಗರದಲ್ಲಿ ಭಾನುವಾರ ಮುಕ್ತಾಯವಾದ ಕರ್ನಾಟಕ ರಾಜ್ಯ ಮುಕ್ತ ರ್ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಪಂದ್ಯಾವಳಿಯಲ್ಲಿ ನಗರದ ಪಿ.ಶೇಟ್ ಪ್ರಜ್ವಲ್ ರ್ಯಾಪಿಡ್ ಹಾಗೂ ಬ್ಲಿಟ್ಜ್ ಎರಡೂ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದು ನಾಗಣ್ಣ ಹಾನರಬಲ್ ಅವಾರ್ಡ್ ಪಡೆದರು.
ಬೆಂಗಳೂರಿನ ಪಾರ್ಥಸಾರಥಿ ರ್ಯಾಪಿಡ್ ವಿಭಾಗದಲ್ಲಿ ಹಾಗೂ ಬ್ಲಿಟ್ಜ್ ವಿಭಾಗದಲ್ಲಿ ಬೆಂಗಳೂರಿನ ಲಿಖಿತ್ ಚಿಲುಕಿರಿ ರನ್ನರ್ಅಪ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ಶೇಟ್ ಪ್ರಜ್ವಲ್ ಹಾಗೂ ಲಿಖಿತ್ ಚಿಲುಕಿರಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದರು.
ನ್ಯೂ ತುಮಕೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಹಾಗೂ ಗ್ರಾಂಡ್ ಚೆಸ್ ಅಕಾಡೆಮಿ ಆಯೋಜಿಸಿದ್ದ ಪಂದ್ಯಾವಳಿಯ ಸಮಾರೋಪ ಸಮಾರಂಭದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ‘ಬೌದ್ಧಿಕ ಕಸರತ್ತಿಗೆ ಚೆಸ್ ಉಪಯುಕ್ತ ಕ್ರೀಡೆ. ಇದು ಕುಳಿತಲ್ಲೇ ಕುಬೇರರಾಗುವ ಬುದ್ಧಿವಂತರ ಆಟವಾಗಿದೆ’ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ‘ಬುದ್ಧಮತ್ತೆ ಹೆಚ್ಚಳಕ್ಕೆ ಚೆಸ್ ಸಹಕಾರಿ. ಇಂತಹ ಕ್ರೀಡೆಯ ಬಗ್ಗೆ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು. ಅದು ಭವಿಷ್ಯದಲ್ಲಿ ಖಚಿತ ನಿರ್ಧಾರ ಕೈಗೊಳ್ಳಲು ಹಾಗೂ ಆತ್ಮವಿಶ್ವಾಸ ಮೂಡಿಸಲು ನೆರವಾಗುತ್ತದೆ’ ಎಂದರು.
ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಸ್.ನಾಗಣ್ಣ ಮಾತನಾಡಿ, ‘ಚೆಸ್ ಆಟದಿಂದ ಏಕಾಗ್ರತೆ, ಚಿಂತನೆ, ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ. ಬೌದ್ಧಿಕ ಶಿಸ್ತು ಮೂಡುತ್ತದೆ. ಅಧ್ಯಯನ ಆಸಕ್ತಿ ಬೆಳೆಯುತ್ತದೆ, ತರಗತಿಯಲ್ಲಿ ಪಾಠ ಕೇಳುವ ಆಸಕ್ತಿ ಹೆಚ್ಚುತ್ತದೆ’ ಎಂದು ಹೇಳಿದರು.
ಪಾಲಿಕೆ ಮೇಯರ್ ಫರೀದಾ ಬೇಗಂ ಮಾತನಾಡಿ, ‘ಮಕ್ಕಳ ಬೌಧ್ಧಿಕ ಚಟುವಟಿಕೆಗಳನ್ನು ಪೋಷಕರು ಪ್ರೋತ್ಸಾಹಿಸಬೇಕು. ಚೆಸ್ನಂತಹ ಕ್ರೀಡೆ ಮಕ್ಕಳ ಏಕಾಗ್ರತೆ, ಗುರಿ ಸಾಧನೆಯ ಆತ್ಮವಿಶ್ವಾಸ ವೃದ್ಧಿಸುತ್ತದೆ’ ಎಂದರು.
ನ್ಯೂ ತುಮಕೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್, ಯುಕೆಸಿಎ ಕಾರ್ಯದರ್ಶಿ ಹನುಮಂತು, ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದ ಅಧ್ಯಕ್ಷ ಕುಂಭಯ್ಯ, ಅಖಿಲಾನಂದ, ಮಂಜುನಾಥ ಜೈನ್ ಇದ್ದರು.