ತುಮಕೂರು: ಶಾಲೆಯಲ್ಲಿ ಮೊಬೈಲ್ ಕಳೆದುಕೊಂಡ ವಿದ್ಯಾರ್ಥಿಯೊಬ್ಬ, ಪೋಷಕರು ಒಡೆಯುತ್ತಾರೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ಗೇಟ್ ಎಸ್ಬಿಐ ಬ್ಯಾಂಕ್ ಸಮೀಪದ ಹರಳಿಮರದ ಪಾಳ್ಯದಲ್ಲಿ ಮಂಗಳವಾರ ನಡೆದಿದೆ.
ಸುಮಿತ್ ರೆಡ್ಡಿ(14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಕಾಳಿದಾಸ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶಾಲೆಗೆ ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ಹೋಗಿ ಕಳೆದುಕೊಂಡು ಬಂದಿದ್ದ. ಮನೆಗೆ ಬಂದೊಡನೆ ಮೊಬೈಲ್ ಕಳೆದುಕೊಂಡಿರುವ ವಿಚಾರವನ್ನು ತನ್ನ ತಂಗಿಗೆ ತಿಳಿಸಿದ್ದಾನೆ. ತಂಗಿಯೂ ಈ ವಿಚಾರ ಅಪ್ಪ–ಅಮ್ಮನಿಗೆ ಗೊತ್ತಾದರೆ ಒಡೆಯುತ್ತಾರೆ ಎಂದು ತಿಳಿಸಿದ್ದಾಳೆ.
ತನ್ನ ತಂದೆ–ತಾಯಿ ಎಲ್ಲಿ ತನಗೆ ಒಡೆಯುತ್ತಾರೋ ಎಂದು ಭಯಗೊಂಡ ಸುಮಿತ್ ಶಾಲಾ ಸಮವಸ್ತ್ರದಲ್ಲೇ ಮನೆಯ ಶೌಚಾಲಯದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾನೆ.
ಈ ಸಂಬಂಧ ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು
ಅಂಕೋಲಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ₹1.40 ಲಕ್ಷ ಮೌಲ್ಯದ ಹಣ, ಆಭರಣಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಆಭರಣ ಕಳೆದುಕೊಂಡ ಮಹಿಳೆಯು 2019ರ ಡಿ.12 ರಂದು ಬೆಂಗಳೂರಿನಲ್ಲಿರುವ ತನ್ನ ಮಗಳ ಮನೆಗೆ ಹೋಗುತ್ತಿದ್ದರು. ಈ ವೇಳೆ ತಮ್ಮ ಹ್ಯಾಂಡ್ ಬ್ಯಾಗ್ನಲ್ಲಿ ₹2 ಸಾವಿರ ನಗದು, 40 ಗ್ರಾಂನ ಎರಡು ಸಣ್ಣ ಚಿನ್ನದ ಬಳೆ, 20 ಗ್ರಾಂನ 2 ಚಿನ್ನದ ಬಳೆ, 10 ಗ್ರಾಂನ ಚಿನ್ನದ ಕರಿಮಣಿ ಸರ, ಮಹಾರಾಷ್ಟ್ರ ಬ್ಯಾಂಕ್ನ ಎಟಿಎಂ ಕಾರ್ಡ್ ಮತ್ತು ಗೋವಾಶಾಖೆಯ ಎಟಿಎಂ ಕಾರ್ಡ್ ಹೊಂದಿದ್ದರು.
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಜಾವಗೊಂಡನಹಳ್ಳಿ ಬಂದಾಗಲು ತಮ್ಮ ಬಳಿಯಲ್ಲಿದ್ದ ಹ್ಯಾಂಡ್ ಬ್ಯಾಗ್ ಇತ್ತು. ಜಾವಗೊಂಡನಹಳ್ಳಿ ಮೂತ್ರ ವಿಸರ್ಜಿಸಿ ನಂತರ ಮಾತ್ರೆ ಸೇವಿಸಿ ನಿದ್ರೆ ಮಾಡುತ್ತಿದ್ದರು. ಬಸ್ ಕ್ಯಾತ್ಸಂದ್ರ ಟೋಲ್ಗೆ ಬಂದಾಗ ನಿದ್ರೆಯಿಂದ ಎಚ್ಚರಗೊಂಡು ನೋಡಿದಾಗ ಹ್ಯಾಂಡ್ ಬ್ಯಾಗ್ನ್ನು ದುರ್ಷರ್ಮಿಗಳು ಕಳವು ಮಾಡಿದ್ದಾರೆ.
ಈ ಸಂಬಂಧ ಮಹಿಳೆ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಘಟನೆ ಕ್ಯಾತ್ಸಂದ್ರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕರಣ ದಾಖಲಿಸಿಕೊಮಡು ಮುಂದಿನ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.