ಶಿರಾ: ‘ಉಪಚುನಾವಣೆಯಲ್ಲಿ ಕ್ಷೇತ್ರದ ಜನ ನನಗೆ ಶಕ್ತಿ ನೀಡಿ ಆಶೀರ್ವಾದ ಮಾಡಿದರೆ ಮದಲೂರು ಕೆರೆಗೆ ನೀರು ತುಂಬಿಸುವ ವಿಚಾರವಾಗಿ ಎಷ್ಟೇ ಅಡೆತಡೆ ಬಂದರೂ ನೀರು ತುಂಬಿಸುವೆ’ ಎಂದು ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಹೇಳಿದರು.
ತಾಲ್ಲೂಕಿನ ಮದಲೂರು ಕೆರೆಗೆ ಗುರುವಾರ ಸಂಜೆ ಭೇಟಿ ನೀಡಿ ಕೆರೆ ವೀಕ್ಷಿಸಿ ಸುದ್ದಿಗಾರರ ಜತೆ ಮಾತನಾಡಿದರು.
‘ಶಿರಾ ತಾಲ್ಲೂಕನ್ನು ನೀರಾವರಿ ಪ್ರದೇಶವಾಗಿಸಲು ಮದಲೂರು ಕೆರೆಗೆ ನೀರು ತರುವ ವಿಚಾರ ಹಾಗೂ ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಯಿಂದ ನೀರು ತರುವುದು ನನ್ನ ಆಸ್ಮಿತೆಯ ಪ್ರಶ್ನೆಯಾಗಿದೆ. ಎಷ್ಟೇ ಕಷ್ಟವಾದರೂ ನೀರು ತರುತ್ತೇನೆ ಎಂದು ನನ್ನ ರಕ್ತದಲ್ಲಿ ಬರೆದುಕೊಡುತ್ತೇನೆ’ ಎಂದು ಹೇಳಿದರು.
‘ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಉಪಟಳದ ನಡುವೆ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆವರೆಗೆ ನಾಲೆ ಸಿದ್ಧವಾಗಿದೆ. 2017ರಲ್ಲಿ ಪ್ರಾಯೋಗಿಕವಾಗಿ 12 ದಿನ ನೀರು ಹರಿಸಲಾಯಿತು. ಬದಲಾದ ರಾಜಕಾರಣದಲ್ಲಿ ಮೂರು ವರ್ಷಗಳಲ್ಲಿ ಹೇಮಾವತಿ ಅಣೆಕಟ್ಟು ತುಂಬಿ ನೀರು ಸಮುದ್ರದ ಪಾಲಾದರೂ ಮದಲೂರು ಕೆರೆಗೆ ನೀರು ಹರಿಯಲಿಲ್ಲ‘ ಎಂದರು.
ಮುಖಂಡರಾದ ದಯಾನಂದ್, ತಿಪ್ಪೇಸ್ವಾಮಿ, ಅಜಯ್, ಮದ್ದಣ್ಣ, ಮಂಜುನಾಥ್ ಇದ್ದರು.