ಕೊರಟಗೆರೆ: ಇಲ್ಲಿನ ನಾಲ್ಕನೇ ವಾರ್ಡಿಗೆ ಸೋಮವಾರ ನಡೆದ ಉಪ ಚುನಾವಣೆ ಶಾಂತಿಯುತವಾಗಿತ್ತು. ಕಾಂಗ್ರೆಸ್ನ ಎನ್.ಕೆ. ನರಸಿಂಹಪ್ಪ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು.
ಒಟ್ಟು 1,283 ಮತದಾರರಪೈಕಿ 1,048 ಮಂದಿ ಮತದಾನದ ಹಕ್ಕು ಚಲಾಯಿಸಿದ್ದಾರೆ. ಅದರಲ್ಲಿ 499 ಮಹಿಳೆಯರು ಮತ್ತು 549 ಪುರುಷರು ಮತ ಚಲಾಯಿಸಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಬಿರುಸಿನ ಮತದಾನ ನಡೆಯಿತು. ಮಧ್ಯಾಹ್ನ ವಿಪರೀತವಾದ ಬಿಸಿಲು ಇದ್ದ ಕಾರಣ ಮತದಾನ ಮಂದಗತಿಯಲ್ಲಿ ಸಾಗಿತ್ತು.
ಮತ ಚಲಾಯಿಸಲು ಬರುತ್ತಿದ್ದ ಮತದಾರರನ್ನು ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮತಗಟ್ಟೆ ಹೊರಗಡೆ ನಿಂತು ದುಂಬಾಲು ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತಗಟ್ಟೆ ಸಮೀಪದ ದೂರದಲ್ಲಿ ಈ ಹಿಂದೆ ಸದಸ್ಯರಾಗಿ ಅಕಾಲಿಕ ಮರಣಕ್ಕೆ ತುತ್ತಾದ ನರಸಿಂಹಪ್ಪ ಅವರ ಫೋಟೊ ಇಟ್ಟಿದ್ದರಿಂದ ಜೆಡಿಎಸ್ ಕಾರ್ಯಕರ್ತರು ಅದನ್ನು ತೆಗೆಸುವಂತೆ ಒತ್ತಾಯಿಸಿದರು.
ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಇದರಿಂದ ಕೆಲಕಾಲ ಗೊಂದಲ ಉಂಟಾಯಿತು. ಚುನಾವಣಾ ಅಧಿಕಾರಿಗಳು ನರಸಿಂಹಪ್ಪ ಫೋಟೊವನ್ನು ತೆಗೆಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು. ಮಾರ್ಚ್31ರಂದು ಫಲಿತಾಂಶ ಘೋಷಣೆಯಾಗಲಿದೆ.