ಗುಬ್ಬಿ: ಕ್ಷಯದಿಂದ ದೇಶದಾದ್ಯಂತ ದಿನಕ್ಕೆ 576 ಜನರು ಮೃತಪಡುತ್ತಿದ್ದಾರೆ ಎಂದು ಗುಬ್ಬಿ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಹಿರೇಮಠ್ ಹೇಳಿದರು.
ಗುಬ್ಬಿ ಬಸ್ ನಿಲ್ದಾಣದಲ್ಲಿ ಬುಧವಾರ ಅರೋಗ್ಯ ಇಲಾಖೆ ಏರ್ಪಡಿಸಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
2020ನೇ ಸಾಲಿನಲ್ಲಿ 2,433 ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿ ಡಾಟ್ಸ್ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ರೋಗದ ಬಗ್ಗೆ ಉದಾಸೀನ ತರವಲ್ಲ. ಎಲ್ಲರೂ ಈ ರೋಗದ ಬಗ್ಗೆ ಅರಿವು ಮೂಡಿಸಿಕೊಂಡು ನಿರ್ಮೂಲನೆ ಮಾಡುವುದು ಕರ್ತವ್ಯ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಬಿಂದುಮಾಧವ್ ಮಾತನಾಡಿ, ಕ್ಷಯ ರೋಗದ ಸಾವು ನೋವುಗಳ ಪ್ರಮಾಣ ಕಡಿಮೆ ಮಾಡುವ ತುರ್ತು ಜವಾಬ್ದಾರಿ ಆರೋಗ್ಯ ಇಲಾಖೆ ಜೊತೆ ಎಲ್ಲರ ಮೇಲಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ವರ್ಷ ‘ಕಾಲಘಟಿಸುತ್ತಿದೆ’ ಎಂಬ ಘೋಷಣೆಯೊಂದಿಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಬಗ್ಗೆ ಎಚ್ಚರಿಸಿದೆ. ತಾಲ್ಲೂಕಿನಲ್ಲಿ ಹಾಲಿ 138 ರೋಗಿಗಳು ಚಿಕಿತ್ಸೆಯ ಮೇಲಿದ್ದಾರೆ. ತಾಲ್ಲೂಕಿನಲ್ಲಿ ಸಕ್ರಿಯ ಕ್ಷಯ ರೋಗಿಗಳನ್ನು ಪತ್ತೆ ಹಚ್ಚುವ ಆಂದೋಲನವನ್ನು ಹಮ್ಮಿಕೊಂಡಿದ್ದು ಆರೋಗ್ಯ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ಮಾಡುವ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದರ ಮೂಲಕ ಈ ರೋಗ ಗುಣಪಡಿಸಬಹುದಾಗಿದೆ ಎಂದರು.
ಆಶಾ ಕಾರ್ಯಕರ್ತೆಯರು, ಅಸ್ಪತ್ರೆ ಸಿಬ್ಬಂದಿ, ಗುಬ್ಬಿಯ ಸಾರ್ವಜನಿಕ ಆಸ್ಪತ್ರೆಯಿಂದ ಜಾಥಾ ಹೊರಟು ಘೋಷಣೆ ಕೂಗುತ್ತ ಬಸ್ ನಿಲ್ದಾಣ ತಲುಪಿ ಅಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಕೇಶವರಾಜ್, ಡಾ.ಸುದರ್ಶನ್, ಆರೋಗ್ಯ ಇಲಾಖೆ ಉಪಸ್ಥಿತರಿದ್ದರು.