ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ 13 ನೇ ಘಟಿಕೋತ್ಸವ ಮಂಗಳವಾರ (ಫೆ.25) ನಡೆಯಲಿದೆ. ಈ ಬಾರಿ ವಿವಿಧ ವಿಭಾಗಗಳ ಕೋರ್ಸ್ಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿರುವ 70 ವಿದ್ಯಾರ್ಥಿಗಳು 92 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಳ್ಳಲಿದ್ದಾರೆ.
ಮೂವರಿಗೆ ಡಿ.ಲಿಟ್. ಪದವಿ, ಸಂಶೋಧನಾ ಕಾರ್ಯವನ್ನು ಪೂರ್ಣಗೊಳಿಸಿದ 94 ವಿದ್ಯಾರ್ಥಿಗಳಿಗೆಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಲಾಗುತ್ತಿದೆ. 6257ವಿದ್ಯಾರ್ಥಿಗಳು ಪದವಿ,1587 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಶಿಕ್ಷಣ, ಸಮಾಜಸೇವೆ, ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕುಣಿಗಲ್ ತಾಲ್ಲೂಕಿನ ಸಿ.ಎನ್.ಮಂಚೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ ಎಂದು ವಿ.ವಿ.ಕುಲಪತಿ ವೈ.ಎಸ್.ಸಿದ್ದೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎಂ.ಎಸ್ಸಿ. ಗಣಿತದಲ್ಲಿ ಎಚ್.ಎಸ್.ಮನೋಹರ್ 5 ಚಿನ್ನದ ಪದಕ, ಎಂ.ಕಾಂ.ನಲ್ಲಿ ಎಂ.ಸಿ.ದಿವ್ಯಾಮಣಿ 4 ಚಿನ್ನದ ಪದಕ, ಎಂ.ಎ.ಕನ್ನಡದಲ್ಲಿ ಟಿ.ಡಿ.ಲಾವಣ್ಯ ಅವರು 3 ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ಘಟಿಕೋತ್ಸವದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ ಅಧ್ಯಕ್ಷ ಮಣಿಕ್ ರಾವ್ ಎಂ.ಸಾಲೊಂಖೆ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.