ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಧಾರೆಯಲ್ಲಿ ಮಿಂದೆದ್ದ ಮಕ್ಕಳು

ತುಮಕೂರು ವಲಯ ಮಟ್ಟದ ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌: ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಜವಾಹರ ನವೋದಯ ವಿದ್ಯಾಲಯ
Last Updated 28 ಜನವರಿ 2020, 14:13 IST
ಅಕ್ಷರ ಗಾತ್ರ

ತುಮಕೂರು: ‘ಬ್ರಿಟೀಷರು ಪೂನಾದಲ್ಲಿ ಅನ್ವೇಷಣೆ ಮಾಡಿದ ಕ್ರೀಡೆ ಯಾವುದು? ಬಾಹ್ಯಾಕಾಶಕ್ಕೆ ತೆರಳಿದ ಮೊದಲ ವ್ಯಕ್ತಿ ಅಮೆರಿಕದವರು–ಈ ಹೇಳಿಕೆ, ಸರಿಯೋ, ತಪ್ಪೋ? ಎಂಬ ಪ್ರಶ್ನೆಗಳನ್ನು ಕ್ವಿಜ್‌ ಮಾಸ್ಟರ್‌ ಕೇಳಿದಾಗ, ಚಿತ್ರ, ಧ್ವನಿ, ವಿಡಿಯೊಗಳ ಮೂಲಕ ಪ್ರಶ್ನೆಗಳನ್ನು ಪರದೆಯಲ್ಲಿ ಮೂಡಿಸಿದಾಗ, ವಿದ್ಯಾರ್ಥಿಗಳಲ್ಲಿ ಕೌತುಕ ಹೆಚ್ಚುತ್ತಿತ್ತು. ಚುರುಕು ವಿದ್ಯಾರ್ಥಿಗಳು ತಟ್ಟನೆ ಉತ್ತರ ಹೇಳಿ, ಅಂಕಗಳನ್ನು ಪಟ್ಟನೆ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು.

ಅಂತಿಮ ಸುತ್ತಿನ ಸ್ಪರ್ಧೆಯಲ್ಲಿದ್ದ ತಂಡಗಳು ಉತ್ತರ ನೀಡಲು ತಡಬಡಾಯಿಸುತ್ತಿದ್ದಾಗ, ‘ನಾವು ಉತ್ತರ ನೀಡುತ್ತೇವೆ’ ಎಂದು ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳು ಕೈ ಎತ್ತಿ ಮೈಕ್‌ ಅನ್ನು ಅತ್ತ ತರುವಂತೆ ಸೂಚಿಸುತ್ತಿದ್ದರು. ಅದೇಷ್ಟೇ ಕಠಿಣ ಪ್ರಶ್ನೆಗಳಿದ್ದರೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳು ಲೀಲಾಜಾಲವಾಗಿ ಉತ್ತರ ನೀಡಿ ಕ್ವಿಜ್‌ ಮಾಸ್ಟರ್‌, ಶಿಕ್ಷಕರು, ಪೋಷಕರನ್ನೆ ನಿಬ್ಬೆರಗಾಗಿಸಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ, ‘ದೀಕ್ಷಾ’ ಸಂಸ್ಥೆ, ತುಮಕೂರು ಮರ್ಚೆಂಟ್ಸ್‌ ಸೌಹಾರ್ದ ಸಹಕಾರಿ ಬ್ಯಾಂಕ್‌ (ಟಿಎಂಸಿಸಿ), ಜಿಲ್ಲಾ ಸಹಕಾರಿ ಬ್ಯಾಂಕ್‌ ಸಹಯೋಗದಲ್ಲಿ ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌–2020’ ವೇದಿಕೆಯು ಈ ಎಲ್ಲ ಕುತೂಹಲ, ಕೌತುಕ, ಸಡಗರಕ್ಕೆ ಸಾಕ್ಷಿಯಾಯಿತು.

ಈ ‘ಸ್ಪರ್ಧಾ ಹಬ್ಬ’ದಲ್ಲಿ ಭಾಗವಹಿಸಲು ಬೆಳಿಗ್ಗೆ 8 ಗಂಟೆಯಿಂದಲೇ ಭವನದ ಆವರಣಕ್ಕೆ ತಂಡೋಪತಂಡವಾಗಿ ವಿದ್ಯಾರ್ಥಿಗಳು ಬಂದರು. ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಹತ್ತಾರು ತಾಲ್ಲೂಕುಗಳ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಸುಮಾರು 450ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಗಾಗಿ ನೋಂದಾಯಿಸಿಕೊಂಡಿದ್ದವು.

ತುಮಕೂರು ವಲಯ ಮಟ್ಟದ ಅಂತಿಮ ಸುತ್ತಿಗೆ ಆರು ತಂಡಗಳನ್ನು ಆಯ್ಕೆ ಮಾಡಲು ಪ್ರಾಥಮಿಕ ಸುತ್ತೊಂದನ್ನು ನಡೆಸಲಾಯಿತು. ಇಲ್ಲಿ ಇಪ್ಪತ್ತು ಪ್ರಶ್ನೆಗಳನ್ನು ಬಿತ್ತರಿಸಲಾಯಿತು. ‘ತುಂಬೆ ಹೂ, ತಮಟೆಯಿಂದಾಗಿ ಯಾವ ನಗರಕ್ಕೆ ನಾಮಕರಣ ಮಾಡಲಾಗಿದೆ? ಶಿವತಾಂಡವ ಸ್ತೋತ್ರ ರಾಗವನ್ನು ಯಾವ ಪೌರಾಣಿಕ ಪಾತ್ರದ ವ್ಯಕ್ತಿ ರಚಿಸಿದ? ಫಿನ್‌ಲೆಂಡ್‌ನ ಪ್ರಧಾನಿ ಸನ್ನಾ ಮರಿನಾ ಇತ್ತೀಚೆಗೆ ಯಾವ ಕಾರಣಕ್ಕೆ ಸುದ್ದಿಯಾದರು? ಎಂಬ ಪ್ರಶ್ನೆಗಳು ಡಿಜಿಟಲ್‌ ಪರದೆಯಲ್ಲಿ ಮೂಡಿದಾಗ, ಮಕ್ಕಳು ತಮ್ಮಲ್ಲೆ ಗುಸು–ಗುಸು, ಪಿಸು–ಪಿಸು ಮಾತನಾಡಿಕೊಂಡು, ಮುದ್ದಾದ ಬರವಣಿಗೆಯಲ್ಲಿ ಉತ್ತರಗಳನ್ನು ಬರೆದರು.

ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವಾಗ ಪಕ್ಕದಲ್ಲಿನ ತಂಡದ ವಿದ್ಯಾರ್ಥಿಗಳು ಎಲ್ಲಿ ಉತ್ತರಗಳನ್ನು ನೋಡಿ, ಕಾಪಿ ಹೊಡೆಯುತ್ತಾರೋ ಎಂದು ಉತ್ತರ ಪತ್ರಿಕೆಯನ್ನು ದಿನಪತ್ರಿಕೆಗಳಿಂದ ಮುಚ್ಚಿಟ್ಟುಕೊಳ್ಳುತ್ತಿದ್ದರು. ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲು ಬಳಸುವ ಪ್ಯಾಡ್‌ ತಂದು ‘ಸ್ಪರ್ಧಾ ಪರೀಕ್ಷೆ’ ಎದುರಿಸಿದರು. ಸಮಯ ಮಿತಿ ಮುಗಿದರೂ ‘ಈ ಪ್ರಶ್ನೆಗೆ ಉತ್ತರ ಹೊಳೆಯಲೇ ಇಲ್ವಲಪ್ಪ’ ಎಂಬ ಬೇಸರದಿಂದಲೇ ಉತ್ತರ ಪತ್ರಿಕೆಗಳನ್ನು ನೀಡಿದರು.

ಪ್ರಶ್ನೆಗಳ ಸರಣಿ–ಉತ್ತರಕ್ಕೆ ಮಕ್ಕಳು ಅಣಿ: ವಲಯದ ಮುಖ್ಯ ಸ್ಪರ್ಧೆಯಲ್ಲಿದ್ದ ಆರು ತಂಡಗಳಿಗೆ ಐದು ಸುತ್ತುಗಳಲ್ಲಿ ಪ್ರಶ್ನೆಗಳ ಸುರಿಮಳೆಯೇ ಆಯಿತು. ಆ ಜ್ಞಾನಾರ್ಜನೆ ‘ವರ್ಷಧಾರೆ’ಯಲ್ಲಿ ಸ್ಪರ್ಧಿಗಳು, ಸಭಿಕರು ಮಿಂದೆದ್ದರು.

‘ರಾಯಚೂರಿನ ಮಸ್ಕಿಯಲ್ಲಿ ಸಿಕ್ಕ ಶಾಸನದಿಂದಾಗಿ ‘ದೇವನಾಮ್‌ ಪ್ರಿಯ’ ಎಂದು ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಚರ್ಕವರ್ತಿ ಬೇರೆ ಹೆಸರಿನಿಂದಲೇ ಪ್ರಸಿದ್ದನಾದ, ಅವನಾರು ಗೊತ್ತೆ ಎಂದು ಕೇಳಿದಾಗ, ವಿದ್ಯಾನಿಕೇತನ ಶಾಲಾ ತಂಡದ ವರುಣ್‌ ತಟ್ಟನೆ ‘ಚರ್ಕವರ್ತಿ ಅಶೋಕ’ ಎಂದು ಉತ್ತರ ಹೇಳಿ, ಅಂಕ ಪಡೆದನು.

ಮಧ್ಯಪ್ರದೇಶದ ಝಬು ಮತ್ತು ಧಾರ್‌ ಪ್ರದೇಶದ ಕೋಳಿಮಾಂಸಕ್ಕೆ ಇತ್ತೀಚೆಗೆ ಭೌಗೋಳಿಕ ಸೂಚಿಕೆ(ಜಿ.ಐ.ಟ್ಯಾಗ್‌) ಮಾನ್ಯತೆ ಸಿಕ್ಕಿದೆ. ಆ ಮಾಂಸದ ವಿಶೇಷವೇನು ಗೊತ್ತೆ ಎಂಬ ಪ್ರಶ್ನೆ ಎದುರಾದಾಗ ಸ್ಪರ್ಧಿಗಳೆಲ್ಲರೂ ತಲೆ ಕೆರೆದುಕೊಂಡು, ಮುಖ ಗಂಟಿಂಕಿಕೊಂಡು ಚಿಂತನಾ ಮಗ್ನರಾದರು. ಅಷ್ಟೋತ್ತಿಗೆ ಸಮಯ ಮೀರಿತ್ತು, ಪ್ರಶ್ನೆ ಸಭಿಕರಿಗೆ ಪಾಸ್‌ ಆಗಿತ್ತು. ಸನ್ಮತಿ ಎಂಬ ವಿದ್ಯಾರ್ಥಿನಿ ಎದ್ದುನಿಂತ ‘ಆ ಮಾಂಸ ಕಡುಗಪ್ಪು ಬಣ್ಣದಿಂದ ಕೂಡಿರುತ್ತದೆ’ ಎಂದು ಹೇಳಿ, ಬಹುಮಾನವನ್ನು ಪಡೆದಳು.

ಗಾಂಧೀಜಿ ಜತೆಗಿದ್ದ ಮಾಲಿಯೊಬ್ಬರು 1948ರ ಜನವರಿ 30ರಂದು ಮಾಡಿದ್ದ ಕೆಲಸಕ್ಕಾಗಿ ಅಂದಿನ ರಾಷ್ಟ್ರಪತಿ ₹500 ಗೌರವಧನ ಕೊಟ್ಟಿದ್ದರು. ಆ ಮಾಲಿ ಯಾವ ಕೆಲಸ ಮಾಡಿದ್ದರು ಹೇಳಿ ನೋಡೋಣ ಎಂದಾಗ, ವಿದ್ಯಾರ್ಥಿಗಳು, ‘ಅರಣ್ಯ ಪ್ರದೇಶ ಅಭಿವೃದ್ಧಿಪಡಿಸಿದರು, ಗಾಂಧಿಯ ಸಮಾಧಿ ಕಟ್ಟಿದರು, ಬಡತನ ನಿರ್ಮೂಲನೆ ಮಾಡಲು ಕೆಲಸ ಆರಂಭಿಸಿದರು’ ಎಂಬ ತಪ್ಪು ಉತ್ತರಗಳನ್ನು ಕೆಲವರು ನೀಡಿದರು. ಆಗ ಸಭಿಕರಲ್ಲಿದ್ದ ವಿದ್ಯಾರ್ಥಿಯೊಬ್ಬ, ‘ಆ ಮಾಲಿ (ಉದ್ಯಾನ ಕೆಲಸಗಾರ) ಗಾಂಧೀಜಿ ಹಂತಕನಾದ ನಾಥರಾಮ್‌ ಗೋಡ್ಸೆಯನ್ನು ಹಿಡಿದುಕೊಟ್ಟಿದ್ದರು’ ಎಂದು ಸರಿ ಉತ್ತರ ನೀಡಿದಾಗ, ಎಲ್ಲರೂ ಚಕಿತರಾದರು.

ಇದು ಸರಿಯೇ, ತಪ್ಪೇ : ಎರಡನೇ ಸುತ್ತಿನಲ್ಲಿ ಹೇಳಿಕೆಯೊಂದನ್ನು ತೋರಿಸಿ, ಸರಿ–ತಪ್ಪು ಗುರುತಿಸುವ ಪರೀಕ್ಷೆ ಒಡ್ಡಲಾಯಿತು. ‘ಎಂ.ಎಸ್‌.ಧೋನಿಗೆ ಐಸಿಸಿ ಯ ಹಾಲ್‌ ಆಫ್‌ ಫೇಮ್‌ ಗೌರವ ಸಂದಿದೆ’ ಎಂಬ ಹೇಳಿಕೆಗೆ ತಂಡವೊಂದು ‘ಸರಿ’ ಎಂದೇಳಿ ಅಂಕ ಕಳೆದುಕೊಂಡಿತು. ‘ಬಾಹ್ಯಾಕಾಶಕ್ಕೆ ತೆರಳಿದ ಮೊದಲ ವ್ಯಕ್ತಿ ಅಮೆರಿಕ ದೇಶದವರು’ ಎಂಬ ಹೇಳಿಕೆಯನ್ನು ‘ಸರಿ’ ಎಂದು ಉತ್ತರಿಸಿದ ಮಾರುತಿ ವಿದ್ಯಾ ಕೇಂದ್ರದ ತಂಡ ಅಂಕ ಗಳಿಕೆಯಲ್ಲಿ ಹಿಂದೆ ಉಳಿಯಿತು. ಸಭಿಕರ ಸಾಲಿನಲ್ಲಿದ್ದ ವಿದ್ಯಾರ್ಥಿಯೊಬ್ಬ ‘ರಷ್ಯಾದ ಯೂರಿಗಗಾರಿನ್‌ ಮೊದಲು ಬಾಹ್ಯಾಕಾಶಕ್ಕೆ ಹೋದರು’ ಎಂದೇಳಿ ಬಹುಮಾನ ಪಡೆದನು.

‘ಮಾಲ್ಗುಡಿ ಡೇಸ್‌’ ಹಾಗೂ ‘ಗೈಡ್‌’ ಪುಸ್ತಕ ಬರೆದವರು ಆರ್‌.ಕೆ.ಲಕ್ಷ್ಮಣ್‌ ಅವರಾ? ಎಂದಾಗ, ‘ಇಲ್ಲ, ಬರೆದವರು ಆರ್‌.ಕೆ.ನಾರಾಯಣ್’ ಎಂದು ಸರಿ ಉತ್ತರ ನೀಡಿದ ವರುಣ್‌ ಮತ್ತು ಪವನ್‌ ತಂಡದ ಸ್ಕೋರ್‌ಬೋರ್ಡ್‌ನಲ್ಲಿ ಅಂಕ ಸೇರಿಸಿದರು.

ಧ್ವನಿ–ದೃಶ್ಯದಲ್ಲಿತ್ತು ಉತ್ತರ: ವಿರಾಟ್‌ ಕೋಹ್ಲಿಯೂ ರಬ್‌ ನೇ ಬನಾದಿ ಜೋಡಿ ಚಿತ್ರದ ‘ತುಜ್‌ ಮೇ ರಬ್‌ ದಿಕ್ತಾ ಹೈ’ ಹಾಡಿದ್ದನ್ನು, ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ಕೇಳಿಸಿದಾಗ, ಅವರು ಯಾರೆಂದು ತಂಡಗಳು ಥಟ್ಟನೆ ಉತ್ತರಿಸಿದವು. ಆದರೆ, ಟೆನ್ನಿಸ್‌ ಆಟಗಾರ ನೋವೊಕ್‌ ಜಾಕೊವಿಕ್‌ ಅವರು ಮಾರಿಯಾ ಶರಪೊವರ ಆಟದ ವೈಖರಿಯ ಅನುಕರಣೆ ವಿಡಿಯೊ, ಅಸ್ವಸ್ಥರಾಗಿದ್ದಾಗ ಒಲಿದ ಬಂದ ಆಸ್ಕರ್‌ ಅನ್ನು ಹಾಸಿಗೆ ಮೇಲೆಯೇ ಮಲಗಿ, ಸಿನಿಮಾ ನಿರ್ದೇಶಕ ಸತ್ಯಜೀತ್‌ ರೇ ಸ್ವೀಕರಿಸಿದ ವಿಡಿಯೊವನ್ನು, ರಜನೀಕಾಂತ್‌ ನಟಿಸಿದ ಏಕೈಕ ವಾಣಿಜ್ಯ ಜಾಹೀರಾತಿನ ವಿಡಿಯೊವನ್ನೂ ಗುರುತಿಸಲು ಸ್ಪರ್ಧಿಗಳು ಸಫಲರಾಗಲಿಲ್ಲ.

ಚುಟುಕು ಪ್ರಶ್ನೆ–ಫಟಾಫಟ್‌ ಉತ್ರ: ಐದನೇ ಸುತ್ತ ‘ರ‍್ಯಾಪಿಡ್‌ ಫಯರ್‘ ಆಗಿತ್ತು. ಕವಿ ತುಳಿಸಿದಾಸ್‌ ಬರೆದ ಎರಡನೇ ಮುಖ್ಯ ಸ್ತೋತ್ರ ಪಠ್ಯ ಯಾವುದು? ಟೊಕಿಯೊದಲ್ಲಿ ನಡೆಯುವ 2020ರ ಒಲಂಪಿಕ್ಸ್‌ಗೆ ಸೇರ್ಪಡೆಯಾಗಿರುವ ಒಳಾಂಗಣ ಕ್ರೀಡೆ ಯಾವುದು? ಧಿಂಗ್‌ ಎಕ್ಸ್‌ಪ್ರೆಸ್‌ ಬಿರುದಾಂಕಿತ ಓಟಗಾರ್ತಿ ಯಾರು? ಎಂಬ ಪ್ರಶ್ನೆಗಳ ಬಾಣಗಳು ತೂರಿಬಂದವು. ಆಗ ಮಕ್ಕಳು ಪ್ರಶ್ನೆಗಳಿಗೆ ಕ್ರಮವಾಗಿ ‘ಹನುಮಾನ್‌ ಚಾಲಿಸ, ಕರಾಟೆ, ಹಿಮಾ ದಾಸ್‌’ ಎಂದು ಕ್ಷರ್ಣಾರ್ಧದಲ್ಲಿ ಹೇಳುತ್ತ, ಪಾಯಿಂಟ್ಸ್‌ ಪಡೆದರು.

ಹೀಗೆ ಇತಿಹಾಸ, ವಿಜ್ಞಾನ, ಕ್ರೀಡೆ, ಪರಿಸರ, ಸಾಹಿತ್ಯದ ಕುರಿತ ಪ್ರಶ್ನೆಗಳಿಗೆ ಸಭಿಕರಾಗಿದ್ದ ನೂರಾರು ಮಕ್ಕಳು ನಾ ಮುಂದು–ತಾ ಮುಂದು ಎಂದು ಉತ್ತರಿಸಲು ಮುಗಿಬಿದ್ದರು. ಸರಿಉತ್ತರ ನೀಡಿದ ಸಭಿಕರಿಗೆ ಬಹುಮಾನವನ್ನೂ ನೀಡಲಾಯಿತು.

ಎಡವಿದ ವಿದ್ಯಾನಿಕೇತನ ತಂಡ: ಮೊದಲ ಸುತ್ತಿನಲ್ಲಿ ವಿದ್ಯಾನಿಕೇತನ ಶಾಲೆಯ ಎರಡೂ ತಂಡಗಳು ಮುಂದಿದ್ದವು. ಆದರೆ ಒಂದು ತಂಡ ಎರಡನೇ ಸುತ್ತಿನಲ್ಲಿ ಮತ್ತೊಂದು ತಂಡ ನಾಲ್ಕನೇ ಸುತ್ತಿನಲ್ಲಿ ಒಂದೂ ಅಂಕ ಗಳಿಸಲಿಲ್ಲ. ಹಾಗಾಗಿ ಅವರು ಪ್ರಥಮ ಸ್ಥಾನದಿಂದ ದೂರ ಉಳಿದರು.

ಮೊದಲ ಸುತ್ತಿನಲ್ಲಿ ಸೊನ್ನೆ ಸುತ್ತಿದ್ದ ನವೋದಯ ಶಾಲಾ ಮಕ್ಕಳು ಚುರುಕಾಗಿ ಉತ್ತರಿಸುತ್ತ, ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡರು. ಕಾಟೇನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸರಿ ಉತ್ತರ ನೀಡಲು ಪ್ರಯತ್ನಿಸಿದರೂ, ಐದನೇ ಸ್ಥಾನಕ್ಕೆ ತೃಪ್ತಿಕೊಳ್ಳಬೇಕಾಯಿತು.

*

ವಲಯದ ಸ್ಪರ್ಧೆಯಲ್ಲಿದ್ದ ತಂಡಗಳು
ರಂಜನ್‌ ವಿ., ಮನೋಜ್‌ ಎಂ.(ಜವಾಹರ ನವೋದಯ ವಿದ್ಯಾಲಯ, ಗೊಲ್ಲಹಳ್ಳಿ, ತುಮಕೂರು–70 ಅಂಕಗಳು), ರಾಮ್ ಪ್ರಸಾದ್‌ ಜಿ.ಕುಲಕರ್ಣಿ, ಮಹಮ್ಮದ್‌ ಯಾಸಿರ್‌(ವಿದ್ಯಾನಿಕೇತನ ಶಾಲೆ, ಎಸ್‌.ಎಸ್‌.ಪುರ, ತುಮಕೂರು–60),ವರುಣ್‌, ಪವನ್‌ (ವಿದ್ಯಾನಿಕೇತನ ಶಾಲೆ, ಎಸ್‌.ಎಸ್‌.ಪುರ, ತುಮಕೂರು–55), ಹರೀಶ್‌, ಪ್ರತಿಕ್ಷಾ (ಮಾರುತಿ ವಿದ್ಯಾಕೇಂದ್ರ, ತುಮಕೂರು–40),ಚಿದಾನಂದ ಸಿ., ಅರ್ಪಿತಾ ಸಿ.ಎನ್‌.(ಸರ್ಕಾರಿ ಪ್ರೌಢಶಾಲೆ, ಕಾಟೇನಹಳ್ಳಿ, ಕೋರಾ ಹೋಬಳಿ–25), ದಿಕ್ಷಿತ್‌ ಕುಮಾರ್‌, ಪ್ರಜ್ವಲ್‌(ಸಹನಾ ಇಂಗ್ಲಿಷ್‌ ಮಾಧ್ಯಮ ಶಾಲೆ, ಪಾವಗಡ–10).

ಪ್ರಥಮ ಸ್ಥಾನ ಗಳಿದ ತಂಡಕ್ಕೆ₹6,000, ದ್ವೀತಿಯ(₹4,000), ತೃತೀಯ(₹2000) ನೀಡಲಾಯಿತು.

*

ಮುತ್ತಿನ ನಗರಿ ಯಾವುದು?
ವಿದ್ಯಾನಿಕೇತನ ಶಾಲೆಯ ಎರಡು ತಂಡಗಳು ಸ್ಪರ್ಧೆಯಲ್ಲಿದ್ದವು. ಎಲ್ಲ ಸುತ್ತು ಮುಗಿದಾಗ ತಲಾ 55 ಅಂಕ ಗಳಿಸಿಕೊಂಡು ಸಮಬಲ ಸಾಧಿಸಿದ್ದವು. ಆಗ ಕೇಳಿದ ‘ಟೈ ಬ್ರೇಕರ್‌’ ಪ್ರಶ್ನೆಗೆ ವಿಶ್ವಾಸದಿಂದ ‘ಹೈದರಾಬಾದ್‌’ ಎಂದು ಉತ್ತರ ನೀಡಿದ ರಾಮ್‌ಪ್ರಸಾದ್‌, ಮೊಹಮ್ಮದ್‌ ಯಾಸಿರ್‌ ಎರಡನೇ ಸ್ಥಾನಕ್ಕೆ ಜಿಗಿದರು. ‘ಭಾರತದ ಮುತ್ತಿನ ನಗರಿ ಯಾವುದು’ ಎಂಬುದು ಟೈ ಬ್ರೇಕರ್‌ ಪ್ರಶ್ನೆಯಾಗಿತ್ತು.

*

ಕ್ವಿಜ್‌ನಿಂದ ಸ್ಫೂರ್ತಿ ತುಂಬಿಕೊಳ್ಳಿ
ಜ್ಞಾನಪ್ರತಿಭೆ ಗುರುತಿಸಿ ‘ಪ್ರಜಾವಾಣಿ’ ವೇದಿಕೆ ಕಲ್ಪಿಸಿದೆ ಎಂದು ಟಿಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಎನ್‌.ಎಸ್‌.ಜಯಕುಮಾರ್‌ ಅಭಿಪ್ರಾಯಪಟ್ಟರು.

ದಿನಂಪ್ರತಿ ರಾಜಕೀಯ ಹೊಡೆದಾಟ– ಬಡಿದಾಟಗಳ ಸುದ್ದಿಗಳನ್ನು ಓದುತ್ತಿದ್ದೇವೆ, ನೋಡುತ್ತಿದ್ದೇವೆ. ಪತ್ರಿಕೆ ಸುದ್ದಿಗಷ್ಟೆ ಸೀಮಿತವಲ್ಲ ಎಂದು ‘ಪ್ರಜಾವಾಣಿ’ ಈ ಸ್ಪರ್ಧೆ ಮೂಲಕ ಹೇಳುತ್ತಿದೆ. ಇಲ್ಲಿಗೆ ಗ್ರಾಮೀಣ ಪ್ರದೇಶದ ಮಕ್ಕಳು ಬಂದಿದ್ದೀರಿ. ಈ ವೇದಿಕೆ ನಿಮಗೆ ಸ್ಫೂರ್ತಿಯಾಗಲಿ. ಇಂದಿನ ಸೋಲು ಸೋಲಲ್ಲ. ಮುಂದಿನ ಗುರಿಯೆಡೆಗೆ ಸಾಗಬೇಕು. ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

*

ಜಡೆಮಾಯಸಂದ್ರ ಈಶ್ವರ್ ಯಾರು?
‘ಮಾಯಸಂದ್ರದಲ್ಲಿ 1963 ಇಸವಿಯಲ್ಲಿ ಹುಟ್ಟಿದ ಇವರಿಗೆ ಬಾಲ್ಯದಲ್ಲಿ ಈಶ್ವರ್‌ ಎಂಬ ಹೆಸರಿತ್ತು. ಈಗ ಇವರು ಬೇರೆ ಹೆಸರಿನಿಂದ ಜನಜನಿತರಾಗಿದ್ದಾರೆ. ಯಾರವರು’ ಎಂಬ ಪ್ರಶ್ನೆಗೆ ಉತ್ಸಾಹದಿಂದ ಎದ್ದ ಹುಡುಗನೊಬ್ಬ ‘ಕೆ.ಎಸ್‌.ಈಶ್ವರಪ್ಪ’ ಹೆಸರು ಹೇಳಿದರೆ ಇನ್ನೊಬ್ಬ ‘ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌’ ಹೆಸರು ಹೇಳಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ. ಅದಕ್ಕೆ ‘ನವರಸ ನಾಯಕ ಜಗ್ಗೇಶ್‌’ ಎಂಬ ಸರಿ ಉತ್ತರ ಸಭಿಕರಿಂದಲೇ ಬಂತು.

*
ಚಿತ್ರಗಳಲ್ಲಿ ಅಂಕ ಹೆಕ್ಕಿದ ಮಕ್ಕಳು
ಮೂರನೇ ಸುತ್ತಿನಲ್ಲಿ ನಾಲ್ಕು ಚಿತ್ರಗಳು ಏಕಕಾಲಕ್ಕೆ ಬಿತ್ತರಿಸಿ, ಅವುಗಳ ನಡುವಿನ ಸಮಾನ ಸಂಬಂಧವನ್ನು ಪತ್ತೆ ಹಚ್ಚಿ ಎಂದು ಜ್ಞಾನವನ್ನು ಓರೆಗೆ ಹಚ್ಚಲಾಯಿತು. ‘ಜ್ವಾಲೆ (ಅಗ್ನಿ), ಸೂರ್ಯ, ಪ್ರಥ್ವಿ, ಬಿಲ್ಲು–ಬಾಣ’ ದ ಚಿತ್ರಗಳನ್ನು ತೋರಿಸುತ್ತಲೇ ವಿದ್ಯಾನಿಕೇತನ ತಂಡ ‘ನಮ್ಮ ದೇಶದ ರಕ್ಷಣಾ ಇಲಾಖೆಯ ಕ್ಷಿಪಣಿಗಳಿಗೆ ಈ ಚಿತ್ರಾರ್ಥದ ಹೆಸರಿಡಲಾಗಿದೆ’ ಎಂದೇಳಿ ಪಾಯಿಂಟ್‌ ಪೇರಿಸಿತು.

‘ನೊಣ, ಇಲಿ, ಕೋತಿ, ನಾಯಿ’ ಚಿತ್ರಗಳನ್ನು ತೋರಿಸಿದಾಗ ಸ್ಪರ್ಧಾರ್ಥಿಗಳಿಗೆ ಉತ್ತರ ಹೊಳೆಯಲಿಲ್ಲ. ಸಭಿಕರ ಗುಂಪಿನಿಂದ ‘ಈ ಎಲ್ಲ ಜೀವಿಗಳನ್ನು ಪರೀಕ್ಷಾರ್ಥವಾಗಿ ಅಂತರಿಕ್ಷಕ್ಕೆ ಕಳುಹಿಸಲಾಗಿತ್ತು’ ಎಂಬ ಸರಿಯುತ್ತರ ತೂರಿಬಂದಾಗ ತಂಡಗಳೇ ಬೆಚ್ಚಿಬಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT