ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿಯ ಪುರ ಗ್ರಾಮದಲ್ಲಿ ರುದ್ರಪ್ಪ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಹಾಗೂ ಕೊಂಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನೆರವೇರಿತು.
ದೇವರ ಉತ್ಸವದ ಮೂಲಕ ಭಕ್ತರು ಅಗ್ನಿಕೊಂಡೋತ್ಸವ ನಡೆಸಿದರು. ರಥಕ್ಕೆ ಬಾಳೆಹಣ್ಣು, ನಿಂಬೆಹಣ್ಣು, ಕಿತ್ತಳೆ ಹಣ್ಣನ್ನು ಎಸೆಯುವ ಮೂಲಕ ಭಕ್ತಿ ಮೆರೆದರು.
ನಗಾರಿ ವಾದ್ಯ, ಆರತಿ, ದೇವರ ಕಳಸ ಗಮನ ಸೆಳೆಯಿತು. ಮೆರವಣಿಗೆ ಮೂಲಕ ಸಾಗಿ ಬಂದ ಗ್ರಾಮಸ್ಥರು ದೇವಸ್ಥಾನದ ಮುಂಭಾಗದಲ್ಲಿ ಹಾಕಿದ್ದ ಕೊಂಡ ತುಳಿಯುವ ಮೂಲಕ ದೇವಾಲಯ ಪ್ರವೇಶಿಸಿ ಹಣ್ಣುಕಾಯಿ ಪೂಜೆ ಮಾಡಿಸಿದರು. ಜಾತ್ರೆಯ ನಿಮಿತ್ತ ಪಲ್ಲಕ್ಕಿ ಉತ್ಸವ ನಡೆಯಿತು.