ತುಮಕೂರು: ವಾಲ್ಮೀಕಿ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ನೀಡದಿದ್ದರೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಮತ್ತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಲಾ ರಾಜಣ್ಣ ಸೋಮವಾರ ಎಚ್ಚರಿಸಿದರು.
ರಾಜ್ಯ ಸರ್ಕಾರವು ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇ 3.5ರಿಂದ 7.5ಕ್ಕೆ ಮೀಸಲಾತಿ ಹೆಚ್ಚಿಸುವ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಕಳುಹಿಸಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂವಿಧಾನದಲ್ಲಿಯೇ ಶೇ 7.5ರಷ್ಟು ಮೀಸಲಾತಿಗೆ ಅವಕಾಶ ಇದೆ. ಕರ್ನಾಟಕದಲ್ಲಿ ರಾಜಕೀಯ ಕ್ಷೇತ್ರ ಹೊರತುಪಡಿಸಿ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ನೀಡಿಲ್ಲ. ಇದರ ಜೊತೆಗೆ ಬೇರೆ ಬೇರೆ ಸಮುದಾಯಗಳನ್ನು ತಂದು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುತ್ತಿದೆ ಎಂದರು.
ಸಮುದಾಯದ ಮುಖಂಡ ದೊಡ್ಡಯ್ಯ ಮಾತನಾಡಿ, ‘ಶೇ 7.5ರಷ್ಟು ಮೀಸಲಾತಿಗಾಗಿ ಹಲವಾರು ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ನಿರ್ದೇಶನದಂತೆ ಈ ಮಾಧ್ಯಮಗೋಷ್ಠಿ ನಡೆಸಲಾಗುತ್ತಿದೆ. ಸರ್ಕಾರ ಮುಂಬರುವ ಅಧಿವೇಶನದಲ್ಲಿ ಕ್ರಮ ಕೈಗೊಳ್ಳದಿದ್ದರೆ, ಸ್ವಾಮೀಜಿ ನೀಡುವ ಆದೇಶದಂತೆ ವಾಲ್ಮೀಕಿ ಸಮುದಾಯ ಹೋರಾಟ ರೂಪಿಸಲಿದೆ’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಜಕುಮಾರ್, ಲಕ್ಷ್ಮಿನಾರಾಯಣ್, ಸಮುದಾಯದ ಮುಖಂಡರಾದ ಪುರುಷೋತ್ತಮ್, ಪ್ರತಾಪ್, ತು.ಬಿ.ಮಲ್ಲೇಶ್, ಡಾ.ನಾಗರಾಜು, ಕೆಂಪಹನುಮಯ್ಯ, ಕೃಷ್ಣಮೂರ್ತಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.