ಶಿರಾ: ‘ಶ್ರೀಸತ್ಯಸಾಯಿ ಕಾರುಣ್ಯನಿಕೇತನದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದು, ಮಕ್ಕಳು ತಮ್ಮ ಜವಾಬ್ದಾರಿ ಅರಿತು ವ್ಯಾಸಂಗ ಮಾಡಿ ಉತ್ತಮ ಪ್ರಜೆಗಳಾಗಬೇಕು’ ಎಂದು ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದರು.
ತಾಲ್ಲೂಕಿನ ಗಾಣದಹುಣಸೆ ಗ್ರಾಮದ ಶ್ರೀಸತ್ಯಸಾಯಿ ಕಾರುಣ್ಯ ನಿಕೇತನ ಶಾಲೆಯಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ, ಪ್ರಶಸ್ತಿ ವಿತರಿಸಿ ಮಾತನಾಡಿದರು.
ಸಂಸ್ಥೆಯು ರಾಜ್ಯದ ವಿವಿಧೆಡೆ 23 ಶಾಲೆಗಳನ್ನು ಪ್ರಾರಂಭಿಸಿ ಉಚಿತ ಶಿಕ್ಷಣ ನೀಡುತ್ತಿದೆ. ಜೊತೆಗೆ, ಸುಸಜ್ಜಿತವಾದ ಆಸ್ಪತ್ರೆ ಪ್ರಾರಂಭಿಸಿ ಚಿಕಿತ್ಸೆ ನೀಡುತ್ತಿದೆ ಎಂದರು.
ಶ್ರೀಸತ್ಯಸಾಯಿ ಕಾರುಣ್ಯನಿಕೇತನದ ಮುಖ್ಯಸ್ಥ ಬಿ. ನಾರಾಯಣ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತವಾಗಿ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಕಲಿತವರು ಉದ್ಯೋಗಕ್ಕಾಗಿ ಪರಡಾಡುವಂತಿಲ್ಲ. ಅವರಲ್ಲಿರುವ ಸಾಮರ್ಥ್ಯ ಗುರುತಿಸಿ ಸಂಸ್ಥೆಯಲ್ಲಿಯೇ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಎಂ. ಮಮತಾ ಮಾತನಾಡಿ, ಸತ್ಯಸಾಯಿ ಕಾರುಣ್ಯನಿಕೇತನ ಸಂಸ್ಥೆಯುಗ್ರಾಮೀಣ ಪ್ರದೇಶಕ್ಕೆ ಹೋಗಿ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಇಂತಹ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಸೌಭಾಗ್ಯ ನಿಮಗೆ ದೊರೆತಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಸತಿ ನಿಲಯದ ಮುಖ್ಯಸ್ಥ ರಾಕೇಶ್, ಮುಖ್ಯಶಿಕ್ಷಕ ಕೆ.ವಿ. ಮಂಜುನಾಥ್, ಸಂಸ್ಥೆಯ ದಿಲೀಪ್, ಶರತ್, ಯಶ್ವಂತ್, ನಟರಾಜು, ಯತೀಶ್ ಕುಮಾರ್, ಮುಖಂಡರಾದ ಗುಳಿಗೇನಹಳ್ಳಿ ನಾಗರಾಜು, ಗೋವಿಂದರಾಜು, ಹೆಂಜಾರಪ್ಪ, ಶಾಂತಗೌಡ ಹಾಜರಿದ್ದರು.