ಶಿರಾ: ಮದಲೂರು ಕೆರೆಗೆ ನೀರು ಹರಿಸಲು ಮುಖ್ಯಮಂತ್ರಿ ಹೇಳಿದಂತೆ ಆರು ತಿಂಗಳು ಸಮಯ ಬೇಡ. ಜನ ಆಶೀರ್ವಾದ ಮಾಡಿದರೆ ಕೇವಲ 30 ದಿನದಲ್ಲಿ ನೀರು ಹರಿಸಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಹೇಳಿದರು.
ನಗರದಲ್ಲಿ ಶುಕ್ರವಾರ ಹಮಾಲಿಗಳನ್ನು ಭೇಟಿ ಮಾಡಿ ಮತಯಾಚಿಸಿದರು.
‘ಮದಲೂರು ಕೆರೆ ಯೋಜನೆ ನಿಲ್ಲಿಸಲು ತಡೆಯಾಜ್ಞೆ ಕೊಟ್ಟಿದ್ದ ಯಡಿಯೂರಪ್ಪ ಅವರ ಬಾಯಲ್ಲಿ ನೀರು ಹರಿಸುವ ಮಾತು ಬಂದಿದ್ದು ಆಶ್ಚರ್ಯ ಮೂಡಿಸಿದೆ. ಯೋಜನೆ ಪ್ರಾರಂಭಕ್ಕೆ ಸಾಕಷ್ಟು ಅಡೆತಡೆಗಳನ್ನು ತಂದೊಡ್ಡಿದರೂ, ಎದೆಗುಂದದೆ ಕೆಲಸ ಮಾಡುವ ಜತೆಗೆ ಹೈಕೋರ್ಟ್ನಲ್ಲಿ ಕೇಸ್ ಹಾಕಿದಾಗಲೂ ನಾನೇ ನ್ಯಾಯವಾದಿಯಾಗಿ ವಾದ ಮಂಡಿಸಿ ಗೆದ್ದಿದ್ದೇನೆ’ ಎಂದರು.
‘ಕೇಂದ್ರ ಸರ್ಕಾರದ ಅನುದಾನವನ್ನು ತಂದು ನಾಲೆ ನಿರ್ಮಾಣ ಮಾಡಿದ್ದೇನೆ. ಅದರೆ ಯಡಿಯೂರಪ್ಪ, ಕುಮಾರಸ್ವಾಮಿ ನಾನು ಮಾಡಿದೆ ಎನ್ನುತ್ತಾರೆ. ಕ್ಷೇತ್ರದ ಜನರು ಜಯಚಂದ್ರ ಮುಳ್ಳಿನ ಹಾದಿಯಲ್ಲಿ ನೆಡದು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದನ್ನು ಮರೆಯುವುದಿಲ್ಲ’ ಎಂದರು.
‘ಮದಲೂರು ಕೆರೆ ನಾನು ಪ್ರಾಯೋಗಿಕವಾಗಿ ನೀರು ಹರಿಸಿದೆ ನಂತರ ಬಂದವರು ಹೇಮಾವತಿ ಜಲಾಶಯದಲ್ಲಿ ನೀರಿದ್ದರು ಮದಲೂರು ಕೆರೆಗೆ ನೀರು ಹರಿಸಲಿಲ್ಲ’ ಎಂದರು.
ಯೋಜನೆಗೆ ಹಣ ಇವರು ಕೊಟ್ಟಿದ್ದರೆ, ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರು ಮದಲೂರು ಕೆರೆಗೆ ನೀರು ಹರಿಸುವ ನಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಗೈರಾಗಿದ್ದು ಏಕೆ ಎಂದು ಪ್ರಶ್ನಿಸಿದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ತಂದು ಕಾಮಗಾರಿ ನಡೆಸಲಾಗಿದೆ ಬಿಜೆಪಿ ಸರ್ಕಾರ ಬಿಡಿಗಾಸನ್ನು ನೀಡಿಲ್ಲ ಎಂದರು.
ಮುಖಂಡರಾದ ಅಲ್ಲಂ ವೀರಭದ್ರಪ್ಪ, ಕಲ್ಕೆರೆ ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಷಣ್ಮುಖಪ್ಪ ಇದ್ದರು.