ಶಿರಾ: ‘ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ನಿಗದಿ ಮಾಡಿ ನೀರು ಹರಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ’ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮದಲೂರು ಗ್ರಾಮದ ಕೆರೆಗೆ ಭಾನುವಾರ ಭೇಟಿ ನೀಡಿ ಕೆರೆ ಸ್ವಚ್ಛತೆಯ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.
ಮದಲೂರು ಕೆರೆಗೆ ಈ ಬಾರಿ ಮಾತ್ರ ನೀರು ಹರಿದರೆ ರಾಜಕೀಯ ಪ್ರೇರಿತ ಎನ್ನುವ ಭಾವನೆ ಬರುತ್ತದೆ. ಅದ್ದರಿಂದ ಈ ಬಗ್ಗೆ ಶಾಸಕರು ಜಾಗೃತವಾಗಬೇಕು ಎಂದರು.
‘ಭದ್ರಾ ಮೇಲ್ದಂಡೆ ಯೋಜನೆಯಿಂದ ಮಾತ್ರ ಶಿರಾ ತಾಲ್ಲೂಕಿಗೆ ಶಾಶ್ವತ ಪರಿಹಾರ ದೊರಕುತ್ತದೆ. ಅದರ ಕಾಮಗಾರಿ ಮುಗಿಯಲು ಇನ್ನು ಕನಿಷ್ಠ 4-5 ವರ್ಷ ಬೇಕು. ಈಗ ಯೋಜನೆಯಲ್ಲಿ ಕೈಬಿಟ್ಟಿರುವ ಕೆರೆಗಳನ್ನು ಪಟ್ಟಿ ಮಾಡಿ ಯೋಜನೆಗೆ ಸೇರಿಸಲು ಶಾಸಕರು ಮುಂದಾಗಬೇಕು’ ಎಂದರು.
‘ಮದಲೂರು ಕೆರೆಗೆ ನೀರು ಹರಿಸುವುದನ್ನು ಜಿಲ್ಲೆಯ ಮುಖಂಡರು ವಿರೋಧಿಸುತ್ತಿರುವುದು ನೋವಿನ ವಿಚಾರ. ಈ ಬಗ್ಗೆ ಶಾಸಕ ಡಾ.ರಂಗನಾಥ್ ಜತೆ ಮಾತನಾಡಿದ್ದೇನೆ. ಬಯಲು ಸೀಮೆಯ ಜನರ ನೀರಿನ ನೋವಿನ ಸಂಕಷ್ಟ ಯಾರಿಗೂ ಬೇಡ’ ಎಂದರು.
ಮದಲೂರು ಕೆರೆಗೆ ನೀರು ಹರಿಸಲು ಕಾನೂನಿನ ಅಡ್ಡಿ ಬರದಂತೆ ಬಹುಗ್ರಾಮ ನೀರಿನ ಯೋಜನೆಗಳನ್ನು ರೂಪಿಸುವಂತೆ ಶಾಸಕರಿಗೆ ಕಿವಿ ಮಾತು ಹೇಳಿದರು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ತುಮಲು ನಿರ್ದೇಶಕ ಎಸ್.ಆರ್.ಗೌಡ, ಮುಖಂಡ ನರಸಿಂಹಮೂರ್ತಿ, ಲಿಂಗದಹಳ್ಳಿ ಸುಧಾಕರ ಗೌಡ, ಮದ್ದೇವಳ್ಳಿ ರಾಮಕೃಷ್ಣ, ಲಕ್ಕನಹಳ್ಳಿ ಮಂಜುನಾಥ್, ಪ್ರಕಾಶ್ ಗೌಡ, ಬಿ.ಎಚ್.ಸತೀಶ್ ಇದ್ದರು.