ತುಮಕೂರು: ಜಿಲ್ಲಾ ಪ್ಲಂಬರ್ ಅಸೋಸಿಯೇಷನ್ ವತಿಯಿಂದ ವಿಶ್ವ ನಲ್ಲಿ ಕೆಲಸಗಾರರ ದಿನಾಚರಣೆ ಹಾಗೂ ವಿಶ್ವ ಜಲಸಂಗ್ರಹ ದಿನದ ಅಂಗವಾಗಿ ಮಳೆ ನೀರು ಸಂಗ್ರಹ ಮತ್ತು ಬಳಕೆ ಮಾಡುವ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರವನ್ನು ಮಾರ್ಚ್ 17ರಂದು ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಮಳೆ ನೀರು ಸಂಗ್ರಹ, ಬಳಕೆ, ಭೂಮಿಗೆ ನೀರು ಇಂಗಿಸುವ ಕಾರ್ಯವನ್ನು ಜನರು ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದರೆ ಮಹಾನಗರಗಳಲ್ಲಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಬಿ.ಜಯಣ್ಣ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಸಂಘದ ಉಸ್ತುವಾರಿ ಮಂಜುನಾಥ್, ‘30X40 ಅಡಿಗಳ ಅಳತೆಯ ನಿವೇಶನದಲ್ಲಿ ಅಂದಾಜು 10 ಚದರ ಅಡಿಗಳ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ. ಆ ಸಮಯದಲ್ಲಿ ₹20 ಸಾವಿರ ವೆಚ್ಚ ಮಾಡಿದರೆ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು. ಈ ನೀರನ್ನು ನಾಲ್ಕು ಜನರು ಇರುವ ಮನೆಯಲ್ಲಿ ಒಂದು ತಿಂಗಳು ಬಳಕೆ ಮಾಡಬಹುದು. ಇದರಿಂದ ಶುದ್ಧ ನೀರು ಲಭ್ಯವಾಗುತ್ತದೆ. ಅಂತರ್ಜಲ ಬಳಕೆ ಮಾಡುವುದು ಕಡಿಮೆಯಾಗುತ್ತದೆ’ ಎಂದು ವಿವರಿಸಿದರು.
ಸಂಘದ ಜಿಲ್ಲಾ ಉಸ್ತುವಾರಿ ಗಂಗಸಂದ್ರ ರಾಜು, ‘ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಉದ್ಘಾಟಿಸುವರು. ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಂಸದ ಜಿ.ಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿ ಶಿವಕುಮಾರ್ ಇತರರು ಭಾಗವಹಿಸುವರು’ ಎಂದರು.
ಸಂಘದ ಉಪಾಧ್ಯಕ್ಷ ಕುಮಾರ ನಾಯ್ಕ್, ಪದಾಧಿಕಾರಿಗಳಾದ ಅಶ್ವತ್ಥನಾರಾಯಣ, ಕೆ. ಮರಿಹನುಮಯ್ಯ, ಹನುಮಂತರಾಯಪ್ಪ, ಬಸವರಾಜು, ಬಿ.ಎನ್. ಕುಮಾರ್, ತಮ್ಮಯ್ಯ, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.