ತುಮಕೂರು: ಬಾಲ ಕಾರ್ಮಿಕತೆ ತಡೆಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದು, ಚಿಂದಿ ಆಯುವ ಮಕ್ಕಳು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದ್ದಾರೆ.
ಚಿಂದಿ ಆಯುವ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮಕ್ಕಳು ಯಾವುದಾದರು ಒಂದು ಅಂಗಡಿಗೆ ಹೋಗಿ ತಾವು ಇಡೀ ದಿನ ಆಯ್ದ ಚಿಂದಿಯನ್ನು ಮಾರಾಟ ಮಾಡುತ್ತಾರೆ. ಆ ಅಂಗಡಿಗಳಿಗೆ ಸರಿಯಾದ ಮಾಲೀಕರು ಇರುವುದಿಲ್ಲ. ಮಕ್ಕಳನ್ನು ರಕ್ಷಿಸಿ, ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಚಿಂದಿ ಆಯುವ ಮಕ್ಕಳು ಇವತ್ತು ಇಲ್ಲಿ, ನಾಳೆ ಮತ್ತೊಂದು ಸ್ಥಳ ಎಂದು ಸುತ್ತಾಡಿ ಕೊಂಡಿರುತ್ತಾರೆ. ಅವರನ್ನು ಕಂಡು ಹಿಡಿಯುವುದು ಅಧಿಕಾರಿಗಳಿಗೆ ಕಷ್ಟದ ಕೆಲಸವಾಗಿದೆ.
ಇದರ ಮಧ್ಯೆಯು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನಾನಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಮಕ್ಕಳನ್ನು ರಕ್ಷಿಸಿ, ಶಾಲೆಗಳಿಗೆ ಸೇರಿಸುವ ಕೆಲಸ ಕಾರ್ಮಿಕ ಇಲಾಖೆಯಿಂದ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ ಬಾಲ ಕಾರ್ಮಿಕ (ತಡೆ ಮತ್ತು ನಿಯಂತ್ರಣ) ಕಾಯ್ದೆಯಡಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಕೆಲಸಕ್ಕೆ ಮಕ್ಕಳನ್ನು ನಿಯೋಜಿಸಿಕೊಂಡ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತುಮಕೂರು ನಗರ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿದ್ದು, ಹೊರ ಜಿಲ್ಲೆ, ರಾಜ್ಯಗಳಿಂದ ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಬಿಹಾರ, ಮಹಾರಾಷ್ಟ್ರ, ಆಂಧ್ರಪ್ರದೇಶದ ರಾಜ್ಯಗಳಿಂದ ಕೆಲಸ ಅರಸಿ ನಗರಕ್ಕೆ ಬರುತ್ತಿದ್ದಾರೆ. ಅವರೊಂದಿಗೆ ತಮ್ಮ ಮಕ್ಕಳನ್ನು ಕರೆ ತರುತ್ತಿದ್ದಾರೆ.
ಹೊರಗಡೆಯಿಂದ ಬರುವ ಮಕ್ಕಳು ಹೆಚ್ಚಾಗಿ ಭಿಕ್ಷಾಟನೆ, ಇತರೆ ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿ ಕೊಳ್ಳುತ್ತಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇದನ್ನು ತಡೆದು ಮಕ್ಕಳ ರಕ್ಷಣೆಗೆ ನಿಲ್ಲುತ್ತಿದ್ದಾರೆ.
ಭಿಕ್ಷಾಟನೆ, ವಿವಿಧ ಕೆಲಸದಲ್ಲಿ ನಿರತರಾಗಿದ್ದ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಸೇರಿಸಲಾಗುತ್ತಿದೆ. ಮಕ್ಕಳ ಪೋಷಕರು ಬಂದು ಅವರ ಜವಾಬ್ದಾರಿ ತೆಗೆದುಕೊಂಡರೆ ಬಿಟ್ಟು ಕಳುಹಿಸುತ್ತಾರೆ. ಇಲ್ಲದಿದ್ದರೆ ಸಮಿತಿಯಲ್ಲಿ ಮಕ್ಕಳು ಜೀವನ ಕಟ್ಟಿ ಕೊಳ್ಳುತ್ತಾರೆ. ಅವರಿಗೆ ಅಗತ್ಯವಾಗಿ ಬೇಕಾದ ಶಿಕ್ಷಣ, ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.