ಪಾವಗಡ: ತಾಲ್ಲೂಕಿನ ಜಾಜೂರಾಯನಹಳ್ಳಿಯ ಸರ್ಕಾರಿ ಶಾಲೆಯ ಬಿಸಿ ಊಟದಲ್ಲಿ ಹುಳುಗಳು ಸಿಕ್ಕಿವೆ. ಹಳೆ ಗೋಧಿ, ಬೇಳೆಯನ್ನು ಶುಚಿಗೊಳಿಸದೆ ಅಡುಗೆಗೆ ಬಳಸಿದ್ದರಿಂದ ಮುದ್ದೆ, ಸಾರಿನಲ್ಲಿ ಹುಳು ಕಂಡುಬಂದಿವೆ.
ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದಲ್ಲಿ ಆಗಾಗ ಹುಳುಗಳು ಕಂಡುಬರುತ್ತವೆ. ಈ ಬಗ್ಗೆ ಶಿಕ್ಷಕರಿಗೆ, ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ವಿದ್ಯಾರ್ಥಿಗಳು, ಪೋಷಕರು ಸಾಕಷ್ಟು ಬಾರಿ ದೂರು ನೀಡಿದ್ದಾರೆ.
‘ದೂರು ನೀಡಿದರೂ ಆಹಾರದ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಮಕ್ಕಳು ಹುಳುಗಳಿರುವ ಊಟವನ್ನೇ ಸೇವಿಸಬೇಕಿದೆ’ ಎಂದು ಪೋಷಕರು ಆರೋಪಿಸಿದ್ದಾರೆ.
‘ಸೆಪ್ಟೆಂಬರ್ ತಿಂಗಳಲ್ಲಿ ನೀಡಿದ ಬೇಳೆ, ಗೋಧಿ ಆಹಾರ ಪದಾರ್ಥಗಳಲ್ಲಿ ಹುಳು ಇರುವುದನ್ನು ಪರಿಶೀಲಿಸಲಾಗಿದೆ. ತಕ್ಷಣ ಆಹಾರ ಪದಾರ್ಥ ಬದಲಿಸಿ ಕೊಡಲಾಗುವುದು’ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರಪ್ಪ ತಿಳಿಸಿದ್ದಾರೆ.
ಶಾಲಾ ಸಿಬ್ಬಂದಿ, ಅಕ್ಷರ ದಾಸೋಹ ಅಧಿಕಾರಿ, ಬಿಇಒ, ಬಿಆರ್ಸಿ ಸೇರಿದಂತೆ ಅಧಿಕಾರಿಗಳ ತಂಡ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.