ಉಡುಪಿ: ಕೋವಿಡ್ ಸೋಂಕು ಹರಡುವಿಕೆ ತಡೆಗೆ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೋವಿಡ್ನಿಂದ ರಾಜ್ಯದ ಜನರೆಲ್ಲರೂ ಮನೆಯಲ್ಲಿದ್ದರೂ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ಸೂಚಿಸಿದ ಕೆಲಸಗಳನ್ನು ನಿರ್ವಹಿಸಿದ್ದಾರೆ. ಕರಾವಳಿಯ ದುರ್ಗಮ ಪ್ರದೇಶಕ್ಕೆ ತೆರಳಿ ಆಹಾರ ಹಂಚಿದ್ದಾರೆ. ಹಲವು ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆಗಳು ನಡೆದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕೋವಿಡ್ ಕಾರ್ಯ ನಿರ್ವಹಣೆ ವೇಳೆ ಗುಣಮಟ್ಟದ ಸುರಕ್ಷತಾ ಸಾಧನಗಳನ್ನು ಕೊಡದ ಕಾರಣ ಹಲವರಿಗೆ ಸೋಂಕು ತಗುಲಿದೆ. ಹಾಗಾಗಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ತಾರತಮ್ಯವಿಲ್ಲದೆ ₹ 50 ಲಕ್ಷದವರೆಗೂ ವಿಮಾ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಐಸಿಡಿಎಸ್ ಯೋಜನೆ ಅನುದಾನ ಹೆಚ್ಚಿಸಬೇಕು, ಗುಣಮಟ್ಟದ ಪಿಪಿಎ ಕಿಟ್, ಸ್ಯಾನಿಟೈಸರ್, ಮಾಸ್ಕ್ ನೀಡಬೇಕು. ಕೊರೊನಾ ಸಂದರ್ಭ ₹ 25,000 ಪ್ರೋತ್ಸಾಹ ಧನ, ಬಸ್ ಪಾಸ್, ಊಟದ ವೆಚ್ಚ ಭರಿಸಬೇಕು, ಎನ್ಪಿಎಸ್ ಲೈಟ್ ಬದಲಿಸಿ ಎಲ್ಐಸಿ ಆಧಾರಿತ ನಿವೃತ್ತಿ ವೇತನ ಜಾರಿಗೊಳಿಸಬೇಕು.
ಸರಿಯಾಗಿ ಬಿಲ್ ಪಾವತಿಸಬೇಕು. ಸಹಾಯಕಿಯರ ಬಡ್ತಿಗೆ ಇರುವ ವಯಸ್ಸಿನ ಮಿತಿ ತೆಗೆಯಬೇಕು, ನೌಕರಿ ಕಾಯಂ ಮಾಡಬೇಕು, ಅಲ್ಲಿಯವರೆಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ₹ 30,000, ಸಹಾಯಕಿಯರಿಗೆ ₹ 21,000 ವೇತನ ನೀಡಬೇಕು, ಅಂಗನವಾಡಿಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ, ಪ್ರಧಾನ ಕಾರ್ಯದರ್ಶಿ ಸುಶೀಲ ನಾಡ ಇದ್ದರು.