ಉಡುಪಿ: ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಹೆಲಿಕಾಪ್ಟರ್ನಲ್ಲಿ ಹಣ ತಂದಿದ್ದಾರೆ ಎಂಬ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಆರೋಪಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದು ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಬೆಳಿಗ್ಗೆ 9.55ಕ್ಕೆ ಅಣ್ಣಾಮಲೈ ಉಡುಪಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದು, ಈ ಸಂದರ್ಭ ಹೆಲಿಕಾಪ್ಟರ್ ಹಾಗೂ ಅವರ ಬ್ಯಾಗ್ ಅನ್ನು ಫ್ಲೈಯಿಂಗ್ ಸ್ಕ್ವಾಡ್ ಪರಿಶೀಲಿಸಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗುವ ಅಂಶಗಳು ಕಂಡುಬಂದಿಲ್ಲ.
ಅಣ್ಣಾಮಲೈ ಪ್ರಯಾಣ ಮಾಡಿದ ವಾಹನದಲ್ಲಿದ್ದ ಬ್ಯಾಗ್ನಲ್ಲಿ ನೀರಿನ ಬಾಟೆಲ್ ಹಾಗೂ 2 ಜತೆ ಬಟ್ಟೆಗಳು ಮಾತ್ರ ಕಂಡುಬಂದಿವೆ. ಕಾಪುವಿಗೆ ತೆರಳುವ ಮಾರ್ಗ ಮಧ್ಯೆಯ ಚೆಕ್ಪೋಸ್ಟ್ನಲ್ಲೂ ಅವರ ಕಾರನ್ನು ಪರಿಶೀಲಿಸಲಾಗಿದೆ. ಅಣ್ಣಾಮಲೈ ತಂಗಿದ್ದ ಓಷನ್ ಪರ್ಲ್ ಹೋಟೆಲ್ನ ಕೊಠಡಿಯನ್ನೂ ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಸಮಯದಿಂದ ನಿರ್ಗಮನದವರೆಗೂ ಹಲವು ಹಂತಗಳಲ್ಲಿ ಪರಿಶೀಲನೆ ನಡೆಸಿದ್ದು ನೀತಿ ಸಂಹಿತೆ ಉಲ್ಲಂಘನೆ ನಡೆದಿಲ್ಲ ಎಂದು ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.