ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃತಕ ಬುದ್ಧಿಮತ್ತೆ ಚಿತ್ರೋದ್ಯಮಕ್ಕೆ ಆತಂಕ: ನಿರ್ಮಾಪಕ ಅಭಯ ಸಿಂಹ

ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನಿರ್ಮಾಪಕ ಅಭಯ ಸಿಂಹ ಆತಂಕ
Published 21 ಮೇ 2024, 16:27 IST
Last Updated 21 ಮೇ 2024, 16:27 IST
ಅಕ್ಷರ ಗಾತ್ರ

ಉಡುಪಿ: ಕೃತಕ ಬುದ್ಧಿಮತ್ತೆಯು ಚಲನಚಿತ್ರೋದ್ಯಮದಲ್ಲಿ ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಚಲನಚಿತ್ರ ನಿರ್ಮಾಪಕ ಅಭಯ ಸಿಂಹ ಹೇಳಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಆಶ್ರಯದಲ್ಲಿ ಫಿಲಂ ಎಸ್ಥೆಟಿಕ್ಸ್ ಬಿಯಾಂಡ್ ಕರಿಕ್ಯುಲಮ್ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಕೃತಕ ಬುದ್ಧಿಮತ್ತೆಯಿಂದಾಗಿ ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾ ಕಲಾವಿದರು ಉದ್ಯೋಗ ಕಳೆದುಕೊಳ್ಳಬಹುದು ಎಂಬ ಆತಂಕ ಕಾಡುತ್ತಿದೆ. ಇದು ಚಲನಚಿತ್ರೋದ್ಯಮದಲ್ಲಿ ಕೃತಕ ಬುದ್ಧಿಮತ್ತೆ ‘ನೈತಿಕವಾಗಿ ಬಳಕೆ’ ಮಾಡಬೇಕಾದ ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದರು.

ಚಲನಚಿತ್ರವು ಅರ್ಥದ ಬಹು ಸಾಧ್ಯತೆಗಳನ್ನು ಹೊಂದಿರುವ ದೃಶ್ಯ ಮಾಧ್ಯಮವಾಗಿದೆ. ಹೊಸ ತಂತ್ರಜ್ಞಾನವು ಅದರ ಸೌಂದರ್ಯ ಮತ್ತು ಅನುಭವದ ಮೇಲೆ ಪರಿಣಾಮ ಬೀರುತ್ತದೆ. ನೈತಿಕ ಮಾನದಂಡಗಳನ್ನು ಹಿಡಿದುಕೊಂಡು ಅರ್ಥಪೂರ್ಣ ಸಿನಿಮಾ ಮಾಡುವುದು ಚಿತ್ರ ನಿರ್ಮಾಪಕರಿಗೆ ಸವಾಲಾಗಿದೆ ಎಂದರು.

ಹಿಂಸೆಯನ್ನು ಚಿತ್ರಿಸುವ ವಿವಿಧ ಸೃಜನಶೀಲ ವಿಧಾನಗಳಿರಬಹುದು. ಸಿನಿಮಾಗಳು ಮಹಿಳೆ ಮತ್ತು ಲಿಂಗ ಸಮಾನತೆಯ ವಿಷಯಗಳ ಕುರಿತು ಹೆಚ್ಚು ಸಂವೇದನಾಶೀಲವಾಗುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮೂಲತಃ ಮಂಗಳೂರಿನವರಾದ ಅಭಯಸಿಂಹ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಪದವೀಧರರಾಗಿದ್ದಾರೆ. ಅನೇಕ ಸಾಕ್ಷ್ಯಚಿತ್ರಗಳ ಹೊರತಾಗಿಯೂ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಆಧಾರಿತ ಪ್ರಶಸ್ತಿ ವಿಜೇತ ತುಳು ಚಲನಚಿತ್ರ ‘ಪಡ್ಡಾಯಿ’ ಸೇರಿದಂತೆ ನಾಲ್ಕು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಅಭಯಸಿಂಹ ಅವರು ‘ಪಡ್ಡಾಯಿ’ ಸಿನಿಮಾದಲ್ಲಿ ಸಾರ್ವತ್ರಿಕ ಕಥೆಯನ್ನು ನಿರೂಪಿಸಲು ಪ್ರಾದೇಶಿಕ ವಿವರಗಳನ್ನು ಸಮೃದ್ಧವಾಗಿ ಬಳಸಿಕೊಂಡಿದ್ದಾರೆ‌. ಷೇಕ್ಸ್‌ಪಿಯರ್‌ ಅವರನ್ನು ಮರುಸೃಷ್ಟಿಸಲು ಮತ್ತು ಮರು ವ್ಯಾಖ್ಯಾನಿಸುವ ಪ್ರಯತ್ನ ಅತ್ಯುತ್ತಮ ಎಂದರು.

ಸಂವಾದದಲ್ಲಿ ಲೇಖಕರಾದ ಪ್ರೊ.ಮುರಳೀಧರ ಉಪಾದ್ಯ, ಪ್ರೊ.ಫಣಿರಾಜ್, ನಟಿ-ನೃತ್ಯ ಕಲಾವಿದೆ ಮಾನಸಿ ಸುಧೀರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಘರ್ ಅಡಾ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT