ಉಡುಪಿ: ಧರ್ಮ ಹಾಗೂ ಹಿಂದುತ್ವಕ್ಕಾಗಿ ಯಾವ ಬಿಜೆಪಿ ಮುಖಂಡರೂ ಜೀವ ಕಳೆದುಕೊಂಡಿಲ್ಲ. ಅಮಾಯಕರ ಜೀವಗಳ ಮೇಲೆ ಅಧಿಕಾರ ಗದ್ದುಗೆ ಏರುತ್ತಿದ್ದಾರೆ. ಇದಕ್ಕೆ ಕರಾವಳಿ ಜನರು ಅವಕಾಶ ಕೊಡಬೇಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಬೈಂದೂರು ತಾಲ್ಲೂಕಿನ ತ್ರಾಸಿಯ ಕಾರ್ವಿ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಹಿಂದುತ್ವ, ಧರ್ಮದ ವಿಚಾರವನ್ನು ಬದಿಗಿಟ್ಟು ಕರಾವಳಿ ಭಾಗದ ಅಭಿವೃದ್ಧಿಗೆ ಹೋರಾಟ ಮಾಡಿ’ ಎಂದು ಸಲಹೆ ನೀಡಿದರು.
ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದು ಬಂದಿರುವ ಬಿಜೆಪಿ ನಾಯಕರು, ಸಮಸ್ಯೆಗಳಿಗೆ ಸ್ಪಂದಿಸದೆ ಎಸಿ ರೂಂನಲ್ಲಿ ಕುಳಿತಿದ್ದಾರೆ. ಮತದಾರರು ಮಾತ್ರ ಬಿಸಿಲಿನಲ್ಲಿ ಒಣಗುತ್ತಿದ್ದಾರೆ. ಧರ್ಮವನ್ನು ಎಲ್ಲರೂ ಸೇರಿ ಕಾಪಾಡೋಣ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಒಗ್ಗಟ್ಟಾಗಿ ಹೋರಾಡೋಣ’ ಎಂದರು.
ಸರ್ಕಾರ ಈಗ ಬೀಳುತ್ತೆ, ನಾಳೆ ಬೀಳುತ್ತೆ ಎಂದು ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆ. ಕನಸು ಈಡೇರುವುದಿಲ್ಲ. ದೈವ ಪ್ರೇರಣೆಯಿಂದ ಮೈತ್ರಿ ಸರ್ಕಾರ ರಚನೆಯಾಗಿದೆ. ಸರ್ಕಾರದ ಆಯಸ್ಸನ್ನು ದೇವರೇ ನಿರ್ಧರಿಸಲಿದ್ದಾನೆ. ಯಡಿಯೂರಪ್ಪನವರು ಸರ್ಕಾರ ಬೀಳಲಿದೆ ಎಂದರೆ ಬೀಳುವುದಿಲ್ಲ ಎಂದು ತಿರುಗೇಟು ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ, ಪರಿಷತ್ ಸದಸ್ಯ ಭೋಜೇಗೌಡ ಅವರೂ ಇದ್ದರು.