ಉಡುಪಿ: ಸಾರಿಗೆ ಮುಷ್ಕರದಿಂದ ಜನಜೀವನ ಅಸ್ತವ್ಯಸ್ತವಾಗಲಿರುವ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಬೆಂಬಲ ನೀಡುತ್ತಿಲ್ಲ. ಬದಲಾಗಿ, ಹೆಚ್ಚುವರಿ ಬಸ್ಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.
ಮಂಗಳವಾರ ಕಚೇರಿಯಲ್ಲಿ ಮಾತನಾಡಿ ‘ರಾಜ್ಯದಲ್ಲಿ 8,000 ಖಾಸಗಿ ಸ್ಟೇಜ್ ಕ್ಯಾರೇಜ್ ಬಸ್ಗಳು, 20,000 ಮ್ಯಾಕ್ಸಿಕ್ಯಾಬ್, 4,000 ಗುತ್ತಿಗೆ ಆಧಾರಿತ ಖಾಸಗಿ ಬಸ್ಗಳಿದ್ದು, ಎಲ್ಲವೂ ಮಾರ್ಚ್ 7ರಿಂದ ರಸ್ತೆಗಿಳಿಯಲಿವೆ’ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಸಾರಿಗೆ ನೌಕರರ ಬಹುತೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆ ಹೊರತು ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆ ಕೊಡಬಾರದು ಎಂದರು.
ಖಾಸಗಿ ಬಸ್ ಮಾಲೀಕರ ಒಕ್ಕೂಟ ಕೂಡ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ. ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಶೇ 60–40 ಮಾದರಿಯಲ್ಲಿ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳ ಸಂಚಾರಕ್ಕೆ ಅವಕಾಶ ನೀಡಬೇಕು. ಖಾಸಗಿ ಬಸ್ಗಳಿಗೆ ಹೆಚ್ಚು ಪರವಾನಗಿ ನೀಡಿದರೆ ಸರ್ಕಾರಿ ಬಸ್ಗಳ ಏಕಸ್ವಾಮ್ಯಕ್ಕೆ ಕಡಿವಾಣ ಬೀಳಲಿದ್ದು, ಮುಷ್ಕರಗಳನ್ನು ತಪ್ಪಿಸಬಹುದು ಎಂದು ಕುಯಿಲಾಡಿ ಸುರೇಶ್ ನಾಯಕ್ ಸಲಹೆ ನೀಡಿದರು.