ಉಡುಪಿ: ಮಾರಕ ಕೋವಿಡ್ ಸೋಂಕು ತಡೆಗೆ ಶ್ರಮಿಸಿ ಜನರಿಂದ ಪ್ರಶಂಸೆಗೊಳಗಾದ ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಟೀಕಿಸಿದ್ದಾರೆ.
ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಅಧಿಕಾರಿಗಳು ಕೊರೊನಾ ಸೋಂಕು ತಡೆಯುವ ವಿರುದ್ಧ ಮತ್ತು ನಿರಾಶ್ರಿತರ ನೆರವಿಗೆ ಶ್ರಮಿಸಿದ್ದಾರೆ. ಈ ಬಗ್ಗೆ ಒಂದೂ ಪ್ರಶಂಸನೀಯ ಮಾತುಗಳನ್ನು ಮಾಜಿ ಸಚಿವರು ಆಡದಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂಥದ್ದಲ್ಲ ಎಂದು ತಿರುಗೇಟು ನೀಡಿದ್ದಾರೆ.
ಚುನಾವಣೆ ಗೆಲ್ಲಲ್ಲು ಸಿಮೆಂಟ್, ಸಿಮೆಂಟ್ ಶೀಟುಗಳನ್ನು ಕೊಟ್ಟು ಗೊತ್ತಿರುವ ಪ್ರಮೋದ್ ಮಧ್ವರಾಜ್ ಅವರು, ಕೊರೋನಾ ಸಂಕಷ್ಟದ ಸಂದರ್ಭ ಎಷ್ಟು ದಿನಸಿ ಕಿಟ್ಗಳನ್ನು ಕೊಟ್ಟಿದ್ದಾರೆ ಎಂಬುದಕ್ಕೆ ದಾಖಲೆ ಕೊಡಲಿ. ಶಾಸಕ ರಘುಪತಿ ಭಟ್ ಅವರು 60 ದಿನಗಳಿಂದ ನಿರಾಶ್ರಿತರು ಹಾಗೂ ವಲಸೆ ಕಾರ್ಮಿಕರಿಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟ ಕೊಟ್ಟಿದ್ದಾರೆ. 3 ಲಕ್ಷಕ್ಕೂ ಅಧಿಕ ಜನರ ಕಣ್ಣೀರು ಒರೆಸಿ ಮಾದರಿಕೆಲಸ ಮಾಡಿದ್ದಾರೆ ಎಂದು ಕುಯಿಲಾಡಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಕೊರೊನಾ ನಿಯಂತ್ರಿಸಲು ಜಿಲ್ಲಾಧಿಕಾರಿ ಮಾಡಿದ ಕೆಲಸವನ್ನು ಜನರು ಪ್ರಶಂಸಿಸಿದ್ದಾರೆ. ಕೊರೊನಾ ಕಾಯಿಲೆ ಇದ್ದಾಗ 60 ದಿನ ಮನೆಯಲ್ಲಿ ಕುಳಿತಿದ್ದ ಮಾಜಿ ಶಾಸಕರಿಂದ ಯಾವ ಸರ್ಟಿಫಿಕೇಟ್ ಅಗತ್ಯವಿಲ್ಲ. ಜಿಲ್ಲಾಡಳಿತಕ್ಕೆ ಮಧ್ವರಾಜ್ ಅವರು ಸಲಹೆ ಸೂಚನೆಗಳನ್ನು ಕೊಡಲಿ. ಅದನ್ನು ಬಿಟ್ಟು ಮುಖ್ಯಮಂತ್ರಿಗೆ ದೂರುಕೊಟ್ಟು ಆರೋಪ ಮಾಡಿ ಪ್ರಚಾರಗಿಟ್ಟಿಸಿಕೊಳ್ಳುವುದು ಬೇಡ ಎಂದು ಕುಯಿಲಾಡಿ ಟಾಂಗ್ ನೀಡಿದ್ದಾರೆ.