ಸಾಲಿಗ್ರಾಮ(ಬ್ರಹ್ಮಾವರ): ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸುವಲ್ಲಿ ಯಕ್ಷಗಾನದಂತಹ ಕಲೆಯ ಕಲಿಕೆ ಪೂರಕವಾದುದು ಎಂದು ಯಕ್ಷಗುರು, ಯಕ್ಷದೇಗುಲದ ಸುದರ್ಶನ ಉರಾಳ ಹೇಳಿದರು.
ಸಾಲಿಗ್ರಾಮ ಮಕ್ಕಳ ಮೇಳವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಾಲಿಗ್ರಾಮ ಚಿತ್ರಪಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿರುವ 10 ದಿನಗಳ ‘ಧೀಂಕಿಟ’ ಯಕ್ಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನದಿಂದ ದೈಹಿಕ ವ್ಯಾಯಾಮದೊಂದಿಗೆ ಮಾನಸಿಕ ಬೆಳವಣಿಗೆ ಆಗುತ್ತದೆ. ಪುರಾಣ ಜ್ಞಾನದಿಂದ ಮಕ್ಕಳ ಮನಸ್ಸು ಅರಳುತ್ತದೆ. ವಿದ್ಯಾಲಯಗಳಲ್ಲಿ ಯಕ್ಷಗಾನದ ಕಲಿಕೆ ನಿರಂತರವಾಗಿರಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಪಿ. ಮಾತನಾಡಿ, ‘ಯಕ್ಷಗಾನವು ಕಣ್ಣಿಗೆ ಆಕರ್ಷಣಿಯವಾದ ಕಲೆಯಾಗಿದೆ. 10 ದಿವಸಗಳಲ್ಲಿ ಪೂರ್ಣ ಯಕ್ಷಗಾನ ಕಲಿಕೆ ಸಾಧ್ಯವಾಗದಿದ್ದರೂ ಮಕ್ಕಳಿಗೆ ಅದರ ಪರಿಚಯ ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರ ದೇವಾಡಿಗ, ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ, ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಹಾಗೂ ಉಪನ್ಯಾಸಕ ಸುಜಯೀಂದ್ರ ಹಂದೆ, ಭಾಗವತ ಗುರು ಲಂಬೋದರ ಹೆಗಡೆ, ಕಲಾವಿದ ಸುಹಾಸ ಕರಬ ಇದ್ದರು.