ಉಡುಪಿ: ಮಣಿಪಾಲದ ಮರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯವಾದ ದಕ್ಷಿಣ ವಲಯ ಅಂತರ ವಿವಿ ಮಹಿಳಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೆಂಗಳೂರಿನ ಜೈನ್ ವಿವಿ ಪ್ರಶಸ್ತಿ ಗೆಲ್ಲುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕೇರಳದ ಕ್ಯಾಲಿಕಟ್ ವಿವಿ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 2–0 ನೇರ ಸೆಟ್ಗಳಿಂದ ಜೈನ್ ವಿವಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ಮೂಲಕ ಸತತ ಐದನೇ ಬಾರಿಗೆ ದಕ್ಷಿಣ ವಲಯ ಅಂತರ ವಿವಿ ಟೂರ್ನಿಯ ಪ್ರಶಸ್ತಿ ಗೆದ್ದ ಕೀರ್ತಿಗೆ ಜೈನ್ ವಿವಿ ಪಾಲಾಯಿತು. ಕ್ಯಾಲಿಕಟ್ ವಿವಿ ಕಳೆದ ಬಾರಿಯೂ ರನ್ನರ್ ಅಪ್ ಆಗಿತ್ತು.
ಫೈನಲ್ ಸಿಂಗಲ್ಸ್ನಲ್ಲಿ ಕ್ಯಾಲಿಕಟ್ ವಿವಿಯ ಅಶ್ವತಿ ಅವರನ್ನು 21-19, 21-09 ಪಾಯಿಂಟ್ಸ್ಗಳಿಂದ ಜೈನ್ ವಿವಿಯ ಶಿಖಾ ರಾಜೇಶ್ ಗೌತಮ್ ಮಣಿಸಿದರು. ಡಬಲ್ಸ್ ಫೈನಲ್ನಲ್ಲಿ ಅಶ್ವತಿ, ಶ್ರುತಿ ಜೋಡಿಯನ್ನು 21-16, 21-14 ಅಂತರದಲ್ಲಿಶಿಖಾರಾಜೇಶ್ ಗೌತಮ್ ಹಾಗೂ ಅಶ್ವಿನಿ ಭಟ್ ಜೋಡಿ ಪರಾಭವಗೊಳಿಸಿತು.
ಚೆನ್ನೈನ ಎಸ್ಆರ್ಎಂ ವಿವಿ ವಿರುದ್ಧ2-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಆಂಧ್ರ ವಿವಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡಿನ ಎಸ್ಆರ್ಎಂ ವಿವಿ ವಿರುದ್ಧ2-1 ಸೆಟ್ಗಳ ಅಂತರದಲ್ಲಿ ಕೇರಳದ ಕ್ಯಾಲಿಕಟ್ ವಿವಿ ಗೆಲುವು ಸಾಧಿಸಿದರೆ, ಆಂಧ್ರ ವಿವಿಯನ್ನು2-0 ಸೆಟ್ಗಳಿಂದ ಜೈನ್ ವಿವಿ ಮಣಿಸಿ ಫೈನಲ್ ತಲುಪಿತ್ತು.
ವಿಜೇತ ತಂಡಕ್ಕೆ ಉಡುಪಿ ಶಾಸಕ ರಘುಪತಿ ಭಟ್, ಮಾಹೆ ವಿವಿ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಸಹ ಕುಲಪತಿ ಡಾ.ಪೂರ್ಣಿಮಾ ಬಾಳಿಗ, ಎಂಐಟಿ ನಿರ್ದೇಶಕ ಡಾ.ಶ್ರೀಕಾಂತ್ ರಾವ್ ಪ್ರಶಸ್ತಿ ಪ್ರದಾನ ಮಾಡಿದರು.