ಉಡುಪಿ: 33 ವರ್ಷಗಳ ಬಳಿಕ ಮಂಗಳೂರು ವಿಶ್ವವಿದ್ಯಾಲಯ ತಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಭಾನುವಾರ ಇಲ್ಲಿನ ಪೂರ್ಣಪ್ರಜ್ಞ ಕಾಲೇಜು ಆವರಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚೈನ್ನೈನ ವಿಇಎಲ್ಎಸ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಅಡ್ವಾನ್ಸ್ಡ್ ಸ್ಟಡೀಸ್ ವಿರುದ್ಧ ಆತಿಥೇಯ ತಂಡದ ಆಟಗಾರರು 47–15ರಲ್ಲಿ ಗೆಲುವು ಸಾಧಿಸಿದರು.
ಪಂದ್ಯದ ಆರಂಭದಿಂದಲೇ ಮೇಲುಗೈ ಸಾಧಿಸುತ್ತ ಸಾಗಿದ ಮಂಗಳೂರು ವಿವಿ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಆಧಿಪತ್ಯ ಸಾಧಿಸಿತು. ಮೊದಲಾರ್ಧದಲ್ಲಿ ತಂಡ 29 ಪಾಯಿಂಟ್ಸ್ ಗಳಿಸಿಕೊಂಡಿತು. ವಿಇಎಲ್ಎಸ್ ಕೇವಲ 6 ಪಾಯಿಂಟ್ಸ್ಗಳಿಗೆ ಸಮಾಧಾನಪಟ್ಟುಕೊಂಡಿತ್ತು. ಮಯಂಕ್ ಹಾಗೂ ರತನ್ ಅವರ ಆಕರ್ಷಕ ರೈಡ್ಗಳು ಕಬಡ್ಡಿ ಪ್ರಿಯರನ್ನು ರಂಜಿಸಿದವು.
ಬೆಳಿಗ್ಗೆ ನಡೆದ ಸೆಮಿಫೈನಲ್ ಪಂದ್ಯದ ಮಂಗಳೂರು ವಿವಿ 49–35ರಲ್ಲಿ ಬನ್ಸಿಲಾಲ್ ವಿವಿಯನ್ನು ಮಣಿಸಿತು. ನಾಲ್ಕರ ಘಟ್ಟದ ಮತ್ತೊಂದು ಹಣಾಹಣಿಯಲ್ಲಿ ವಿಇಎಸ್ಎಸ್ 49–42ರಲ್ಲಿ ರೋಹ್ಟಕ್ನ ಮಹರ್ಷಿ ದಯಾನಂದ ವಿವಿಯನ್ನು ಪರಾಭವಗೊಳಿಸಿತು.
ಚಾಂಪಿಯನ್ ಪಟ್ಟ ಅಲಂಕರಿಸಿದ ಮಂಗಳೂರು ವಿಶ್ವವಿದ್ಯಾಲಯ ತಂಡದ ಆಟಗಾರರು