ಉಡುಪಿ: ಕನಕದಾಸರು ರಚಿಸಿರುವ ಕೃತಿಗಳು, ಸಂದೇಶಗಳು ಮಾನವ ಸಮಾಜದಲ್ಲಿ ಸಮಾನತೆಯಿಂದ ಹಾಗೂ ಮತ್ತು ಸಹಬಾಳ್ವೆಯಿಂದ ಬದುಕಲು ಅಗತ್ಯವಿರುವ ಸಂದೇಶವನ್ನು ಸಾರುತ್ತವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಹೇಳಿದರು.
ರಜತಾದ್ರಿಯ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕನಕದಾಸ ಮತ್ತು ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಜಾತಿ, ಮತ, ಪಂಥ ಹಾಗೂ ಮೇಲು ಕೀಳು ಎಂಬ ಭೇದವಿಲ್ಲದೆ ಜಗತ್ತಿನ ಎಲ್ಲ ವ್ಯಕ್ತಿಗಳು ಸಮಾನರು ಎಂಬ ತತ್ವವನ್ನು ‘ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಕೀರ್ತನೆಗಳ ಸಮಾಜಕ್ಕೆ ಸಂದೇಶ ನೀಡಿದ್ದಾರೆ.
ದೇವರು ಸದಾ ಬಡವರ ಪರ ಎಂಬ ವಿಚಾರವನ್ನು ರಾಮಧ್ಯಾನ ಚರಿತೆಯ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ. ಮನುಷ್ಯ ಗುರಿ ತಲುಪುವುದು ಮುಖ್ಯವಲ್ಲ, ಗುರಿ ತಲುಪುವ ಹಾದಿಯೂ ಉತ್ತಮವಾಗಿರಬೇಕು. ಉತ್ತಮ ದಾರಿಯಲ್ಲಿ ನಡೆಯಲು ಕನಕದಾಸರ ಸಂದೇಶಗಳು ಸದಾ ದಾರಿದೀಪಗಳಾಗಿರುತ್ತವೆ ಎಂದರು.
ಉಡುಪಿಗೂ ಕನಕದಾಸರಿಗೂ ಅವಿನಾಭಾವ ಸಂಬಂದವಿದ್ದು, ಕೃಷ್ಣನಡೆಗೆ ಅವರಿಗಿದ್ದ ಭಕ್ತಿಯ ಸೆಳೆತ ಮತ್ತು ಕೃಷ್ಣ ಮಠದ ಕನಕನ ಕಿಂಡಿಯ ಮಹತ್ವ ಎಲ್ಲರಿಗೂ ತಿಳಿದಿದೆ ಎಂದರು.
ಸ್ತ್ರೀ ಶಕ್ತಿಯ ಪ್ರತೀಕವಾಗಿರುವ ಒನಕೆ ಓಬವ್ವ, ಸ್ತ್ರೀ ಧರ್ಮ ಕಾಪಾಡಿಕೊಂಡು, ಮಾತೃತ್ವ ಭಾವನೆಯಿಂದ ಕೋಟೆಯನ್ನು ರಕ್ಷಿಸಿದ ಘಟನೆ ಇತಿಹಾಸದಲ್ಲಿ ದಾಖಲಾಗಿದೆ. ಮಹಿಳೆಯರಲ್ಲಿರುವ ತಾಳ್ಮೆ, ಧೈರ್ಯ, ಶೌರ್ಯ ಮತ್ತು ಶಕ್ತಿಯನ್ನು ಓಬವ್ವ ಜಗತ್ತಿಗೆ ಸಾರಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಪ್ರಸನ್ನ ಕನಕದಾಸ ಮತ್ತು ಒನಕೆ ಓಬವ್ವ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಶಿವಕುಮಾರ್, ಹಾಲುಮತ ಮಹಾಸಭಾ ರಾಜ್ಯ ಸಮಿತಿಯ ಸಂಘಟನಾ ಕಾರ್ಯದರ್ಶಿ ಹನುಮಂತ ಜಿ.ಗೋಡೆ, ಉಡುಪಿ ಮತ್ತು ದಕ್ಷಿಣ ಕನ್ನಡ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಸ್ವಾಗತಿಸಿ ವಂದಿಸಿದರು.