ಕಾರ್ಕಳ: ಚುನಾವಣೆ ಪ್ರಕ್ರಿಯೆ ಪ್ರಜಾತಂತ್ರದ ಜೀವಾಳವಾಗಿದ್ದು, ಇದರಲ್ಲಿ ಭಾಗವಹಿಸುವವರು ಸೋಲು ಗೆಲುವು ಲೆಕ್ಕಿಸದೆ ಜನಸೇವೆಗೆ ಬದ್ಧವಾಗಿರಬೇಕು. ಇದು ನಿಜವಾದ ರಾಜಧರ್ಮ ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ವಿಧಾನ ಪರಿಷತ್ ನೈಋತ್ಯ ಪಧವೀದರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ಚುನಾವಣಾ ಪೂರ್ವತಯಾರಿ, ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಪಕ್ಷದ ಜನಪರ ಸಿದ್ಧಾಂತಗಳು, ಹಿಂದಿನ ಅವಧಿಯಲ್ಲಿ ನಾನು ಮಾಡಿದ ಆದ್ಯತಾವಲಯದ ಅಭಿವೃದ್ಧಿ ಕೆಲಸಗಳು, ಕಾಯಕರ್ತರ ಪರಿಶ್ರಮ ಗೆಲುವು ತರಲಿದೆ. ನಮ್ಮ ಯುವ ಕಾರ್ಯಕರ್ತರಲ್ಲಿ ಪಕ್ಷಕ್ಕಾಗಿ ದುಡಿಯುವ ಬದ್ಧತೆ ಇದೆ. ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆ ಹೊತ್ತು ಅವರು ಪಕ್ಷಕ್ಕಾಗಿ ದುಡಿಯಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ವಿಧಾನ ಪರಿಷತ್ತಿನ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನಮ್ಮ ಪಕ್ಷದ ಪ್ರತಿಷ್ಠೆ ಪ್ರಶ್ನೆ. ಪಕ್ಷ ನಮಗೆ ಕೆ.ಕೆ. ಮಂಜುನಾಥ್, ಆಯನೂರು ಮಂಜುನಾಥ ಅವರಂತಹ ಸಮರ್ಥ ಅಭ್ಯರ್ಥಿಗಳನ್ನು ನೀಡಿದೆ. ಈಗಾಗಲೇ ನಮ್ಮ ಸರ್ಕಾರ ಒಂದು ವರ್ಷ ಪೂರೈಸಿದ್ದು ಈ ಅವಧಿಯ ಜನಪರ ಕೆಲಸಗಳನ್ನು ಮುಂದಿಟ್ಟು ಗೆಲುವು ಸಾಧಿಸುವುದು ದೊಡ್ಡ ಸಮಸ್ಯಲ್ಲ. ಪಕ್ಷದ ಕಾರ್ಯಕರ್ತರು ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರುವ ಶಿಕ್ಷಕರು, ಪದವೀಧರರನ್ನು ಗುರುತಿಸಿ ಭೇಟಿಯಾಗಿ ಮತ ಚಲಾವಣೆ ಪ್ರಕ್ರಿಯೆಯ ಮಾಹಿತಿ ನೀಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕೆಪಿಸಿಸಿ ಹಿಂದುಳಿದ ವರ್ಗದ ಅಧ್ಯಕ್ಷ ಡಿ.ಆರ್. ರಾಜು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ನಿಕಟಪೂರ್ವ ಬ್ಲಾಕ್ ಅಧ್ಯಕ್ಷ ವಕೀಲ ಶೇಖರ ಮಡಿವಾಳ, ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ, ವಿಧಾನ ಪರಿಷತ್ ಚುನಾವಣೆ ಕಾರ್ಕಳ ಕ್ಷೇತ್ರ ಉಸ್ತುವಾರಿ ಪ್ರೊ.ಸುದೀಪ್ ಹೆಗ್ಡೆ, ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕುಕ್ಕುಂದೂರು ಉದಯ ಶೆಟ್ಟಿ, ಎಸ್ಸಿ, ಎಸ್ಟಿ ಘಟಕ ಜಿಲ್ಲಾಧ್ಯಕ್ಷ ಜಯಕುಮಾರ್, ಇಂಟಕ್ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಐಟಿ ಸೆಲ್ ಅಧ್ಯಕ್ಷ ರೋಷನ್ ಶೆಟ್ಟಿ, ಬ್ಲಾಕ್ ಮಹಿಳಾಧ್ಯಕ್ಷೆ ಅನಿತಾ ಡಿಸೋಜ ಇದ್ದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ, ಪುರಸಭಾ ಸದಸ್ಯ ಶುಭದಾ ರಾವ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತಲಿನೊ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಮತದಾನ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.