ಕಾರ್ಕಳ: ‘ರಾಜ್ಯದಲ್ಲಿ ಒಟ್ಟು 15 ಲಕ್ಷ ಹೆಕ್ಟೇರ್ ಪ್ರದೇಶ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿದ್ದು ಉಡುಪಿ ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್ ಇದೆ. ಅದರ ಪರಿಹಾರವನ್ನು ಕಂಡುಕೊಳ್ಳುವುದು ಸರ್ಕಾರದ ಬದ್ಧತೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಡವರಿಗೆ ನಿವೇಶನ, ಮನೆ, ನೀರು, ವಿದ್ಯುತ್, ರಕ್ಷಣೆ ಸೇರಿದಂತೆ ಸೌಕರ್ಯ ಒದಗಿಸುವುದು ಸರ್ಕಾರದ ಜಬಾವ್ದಾರಿಯಾಗಿದ್ದು, ಇದಕ್ಕೆ ಡೀಮ್ಡ್ ಫಾರೆಸ್ಟ್ನಿಂದಾಗಿ ಸೌಲಭ್ಯ ಒದಗಿಸಲು ಅಸಾಧ್ಯವಾಗಿದೆ‘ ಎಂದರು.
ಗೋರಕ್ಷಣೆ ಉದ್ದೇಶದಿಂದ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆಗಳನ್ನು ತೆರೆಯಲಾಗುವುದು. ಪ್ರಥಮ ಹಂತದಲ್ಲಿ 30 ಗೋಶಾಲೆಗಳು ನಿರ್ಮಾಣವಾಗಲಿವೆ. ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳ ವತಿಯಿಂದ ರಾಜ್ಯದಲ್ಲಿ 50 ಗೋಶಾಲೆಯನ್ನು ನಡೆಸಲಾಗುವುದು. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ಸಾಮೂಹಿಕ ವಿವಾಹ ಸಪ್ತಪದಿಗೆ ಸರ್ಕಾರ ಮತ್ತೆ ಚಾಲನೆ ನೀಡಲಿದೆ. ಪ್ರತಿ ಜೋಡಿಗೆ ₹ 55 ಸಾವಿರ ಖರ್ಚು ಭರಿಸಲಿದೆ’ ಎಂದರು.
ರಾಜ್ಯಕ್ಕೆ 1.5 ಕೋಟಿ ಲಸಿಕೆ ಬೇಡಿಕೆಯಿದ್ದು, ಅದನ್ನು ಕೇಂದ್ರ ಸರ್ಕಾರದ ಮುಂದಿರಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿದ ಎಲ್ಲ ಕುಟುಂಬಸ್ಥರು ಇದರ ಪ್ರಯೋಜನ ಪಡೆಯಬಹುದು ಎಂದರು.
ದೇವಸ್ಥಾನಗಳು ಈಗಾಗಲೇ ತೆರೆದುಕೊಂಡಿವೆ. ಶೀಘ್ರವೇ ಅಲ್ಲಿನ ಸೇವಗೆಳು ಹಾಗೂ ಅನ್ನದಾನ ಸೇವೆ ಆರಂಭವಾಗಲಿವೆ. ಪ್ರಸಿದ್ಧ ಕೇತ್ರಗಳಲ್ಲಿ ನೂಕುನುಗ್ಗಲು ಆಗುವುದರಿಂದ ಸೂಕ್ತ ಕ್ರಮ ಅನುಸರಿಸಬೇಕಾಗಿದೆ. ಕೋವಿಡ್ ಇದೀಗ ಶೇ 5 ಕ್ಕಿಂತ ಕಡಿಮೆಯಿದ್ದು, ಒಂದು ವೇಳೆ ಅದಕ್ಕಿಂತ ಹೆಚ್ಚಾದಲ್ಲಿ ಮತ್ತೆ ಲಾಕ್ಡೌನ್ ಅನಿವಾರ್ಯವಾಗಬಹುದು ಎಂದು ಹೇಳಿದರು.