ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ತುಡಿತಕ್ಕೆ ಸಂಘ ಸಂಸ್ಥೆಗಳು ಸ್ಪಂದಿಸಲಿ: ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕೋಟ: ಇಂಡಿಕಾ ಕಲಾ ಬಳಗದ 14ನೇ ವಾರ್ಷಿಕೋತ್ಸವದಲ್ಲಿ ಶಾಸಕ ಕಿರಣ್
Published 15 ಜನವರಿ 2024, 13:21 IST
Last Updated 15 ಜನವರಿ 2024, 13:21 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ಸಂಘ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯ ಚೌಕಟ್ಟಿನಲ್ಲಿ ಆ ಭಾಗದ ಜನಸಾಮಾನ್ಯರ ತುಡಿತಕ್ಕೆ ಸ್ಪಂದಿಸಿ ನಿರಂತರವಾಗಿ ಸಾಮಾಜಿಕ ಬದ್ಧತೆ ಪ್ರದರ್ಶಿಸುತ್ತಿರಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಇಲ್ಲಿನ ಮಣೂರಿನ ಗೀತಾನಂದ ವೇದಿಕೆಯ ಸಭಾಂಗಣದಲ್ಲಿ ನಡೆದ ಇಂಡಿಕಾ ಕಲಾ ಬಳಗದ 14ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗುರುತಿಸುವ ಕಾರ್ಯ ಶ್ಲಾಘನೀಯ. ಇನ್ನಷ್ಟು ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವಂತಾಗಲಿ ಎಂದು ಹಾರೈಸಿದರು.

ಕಲಾಬಳಗದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ. ಕುಂದರ್ ಉದ್ಘಾಟಿಸಿದರು. ಯಕ್ಷಕಲಾವಿದ, ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನಾಥ್ ಆಚಾರ್ ಅವರಿಗೆ ಯಕ್ಷಗಾನ ಕಲಾವಿದ ಮೊಳಹಳ್ಳಿ ಹೆರಿಯ ನಾಯ್ಕ ಸ್ಮಾರಕ ಇಂಡಿಕಾ ಕಲಾಬಳಗದ ಪುರಸ್ಕಾರ ಪ್ರದಾನ ಮಾಡಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಎಂ. ಜಯರಾಮ ಶೆಟ್ಟಿ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಕ್ರೀಡಾ ಸಾಧಕಿ ಸಂಜನಾ ಆಚಾರ್ ಗಿಳಿಯಾರು, ಅಂತರರಾಷ್ಟ್ರೀಯ ಯೋಗಪಟು ತನ್ವಿತಾ ವಿ, ಶೈಕ್ಷಣಿಕ ಸಾಧಕಿ ಆತ್ಮಿಕಾ ಶ್ರೀಯಾನ್ ಪ್ರತಿಭಾ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಯಕ್ಷಗಾನ ವಿಮರ್ಶಕ ಪ್ರೊ.ಎಸ್.ವಿ. ಉದಯ ಕುಮಾರ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಹೊಸನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀಧರ ಶೆಟ್ಟಿ ಅಡಗೋಡಿ, ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ ಎಚ್. ಕುಂದರ್, ಮನೋವೈದ್ಯ ಡಾ.ಪ್ರಕಾಶ್‌ ಸಿ.ತೋಳಾರ್, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ ಗಾಣಿಗ, ಗೋವಿಗಾಗಿ ಮೇವು ಸ್ಥಾಪಕಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಸ್ಥಳೀಯ ಮುಖಂಡ ದಾರೋಜಿ ಆನಂದ್‌ ಕಾಂಚನ್, ಪಡುಕರೆ ಸಂಯುಕ್ತ ಪ್ರೌಢಶಾಲಾ ಪ್ರಾಥಮಿಕ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ, ಕಲಾ ಬಳಗದ ನಿಕಟಪೂರ್ವ ಅಧ್ಯಕ್ಷ ಸಂತೋಷ ತಿಂಗಳಾಯ, ಉದ್ಯಮಿ ಬಿಜು ನಾಯರ್, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಣೈ ಕೋಟ ಇದ್ದರು. ಕಲಾಬಳಗ ಸದಸ್ಯ ಪ್ರಭಾಕರ ಮಣೂರು ಸ್ವಾಗತಿಸಿದರು. ಪತ್ರಕರ್ತ ರವೀಂದ್ರ ಕೋಟ ವಂದಿಸಿದರು. ಸಂತೋಷ ಕುಮಾರ್ ಕೋಟ, ಸುಜಾತ ಬಾಯರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT