ಉಡುಪಿ: ಕುಂದಾಪುರ ತಾಲ್ಲೂಕು ಚೌಕಡಿ ಬೆಟ್ಟು ನೆರಂಬಳ್ಳಿ ಹಂಗಳೂರಿನ ವಿನಯ್ ಪೂಜಾರಿ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಬುಧವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಂಗಳೂರಿನ ಹೊಸತಪ್ಲುವಿನ ಅಕ್ಷಯ್, ಬಸ್ರೂರು ಗುಂಡಿಗೋಳಿ ಅರಳಿಕಟ್ಟೆ ಮನೆಯ ಪ್ರವೀಣ್ ಪೂಜಾರಿ, ಬಸ್ರೂರು ಗುಂಡಿಗೋಳಿ ಬೈಲ್ಮನೆಯ ಸತೀಶ್ ಪೂಜಾರಿ ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ವಿವರ:
ಮಾರ್ಚ್ 23ರಂದು ವಿನಯ ಪೂಜಾರಿ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಏ.4ರಂದು ಅಂಪಾರು ಗ್ರಾಮದ ಹಡಾಳಿ ಬಳಿ ವಾರಾಹಿ ನದಿಯಲ್ಲಿ ವಿನಯ ಪೂಜಾರಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತರ ಮಾವ ಶೀನ ಪೂಜಾರಿ ಶವವನ್ನು ಗುರುತಿಸಿದ ಬಳಿಕ ಬಳಿಕ ಶಂಕರ ನಾರಾಯಣ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿತ್ತು.
ವಿನಯ್ ಮೃತದೇಯವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಕುತ್ತಿಗೆಯನ್ನು ಬಲವಾಗಿ ಹಿಸುಕಿದ ಪರಿಣಾಮ ವಿನಯ್ ಮೃತಪಟ್ಟಿರುವುದಾಗಿ ತಜ್ಞರು ವರದಿ ನೀಡಿದ್ದರು. ಸಹೋದರಿ ಜಯಶ್ರೀ ವಿನಯ್ ಕೊಲೆಯಾಗಿರುವ ಅನುಮಾನ ವ್ಯಕ್ತಪಡಿಸಿ ಕೊಲೆಯ ಹಿಂದೆ ಸ್ನೇಹಿತರಾದ ಅಕ್ಷಯ್ ಹಾಗೂ ಇತರರ ಕೈವಾಡದ ವಿರುವುದಾಗಿ ದೂರು ನೀಡಿದ್ದರು. ದೂರಿನನ್ವಯ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಸ್ಪಿ ಅಕ್ಷಯ್ ಎಂ.ಹಾಕೆ ಅವರ ನಿರ್ದೇಶನದಂತೆ ಎಎಸ್ಪಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಇನ್ಸ್ಪೆಕ್ಟರ್ ಗೋಪಿಕೃಷ್ಣ ನೇತೃತ್ವದಲ್ಲಿ ಶಂಕರ ನಾರಾಯಣ ಪಿಎಸ್ಐ ಶ್ರೀಧರ ನಾಯ್ಕ, ಅಪರಾಧ ಪತ್ತೆ ದಳದ ಸಿಬ್ಬಂದಿ ರಾಮು ಹೆಗ್ಡೆ, ರಾಘವೇಂದ್ರ ದೇವಾಡಿಗ, ಕುಂದಾಪುರ ಠಾಣೆ ಸಿಬ್ಬಂದಿಸಂತೋಷ್ ಕುಮಾರ್, ಕೆ.ಯು.ಸಂತೋಷ್, ಶಂಕರ ನಾರಾಯಣ ಠಾಣೆಯ ಗೋಪಾಲಕೃಷ್ಣ, ಮಂಜುನಾಥ, ರಾಘವೇಂದ್ರ, ಪುನಿತ್ ಕುಮಾರ್ ಶೆಟ್ಟಿ, ಆಲಿಂಗರಾಯ ಕಾಟೆ, ಜಯರಾಮ, ಸತೀಶ್, ಚಂದ್ರಕುಮಾರ್, ಮಧುಸೂದನ್, ಅನಿಲ್ ಕುಮಾರ್ ತಂಡ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.