ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡುಬಿದ್ರಿ: ಸ್ಕೂಟರ್ ಡಿಕ್ಕಿ, ಸವಾರ ಸಾವು

Last Updated 12 ಆಗಸ್ಟ್ 2022, 5:27 IST
ಅಕ್ಷರ ಗಾತ್ರ

ಪಡುಬಿದ್ರಿ: ಹೆದ್ದಾರಿ ಬದಿ ಅಳವಡಿಸಿದ್ದ ಕಬ್ಬಿಣದ ತಡೆಬೇಲಿಗೆ ಸ್ಕೂಟರ್ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ನಡೆದಿದೆ.

ಪಂಜಾಬ್‌ನ ರಾಜ್‌ಕಿಶೋರ್(28) ಮೃತ ಯುವಕ. ನಂದಿಕೂರು ಕೈಗಾರಿಕಾ ಪ್ರದೇಶದ ಆಹಾರ ಸಂಸ್ಕರಣಾ ಘಟಕದಲ್ಲಿ ಕರ್ತವ್ಯದಲ್ಲಿದ್ದ ರಾಜ್‌ಕಿಶೋರ್ ಬೆಳ್ಮಣ್‌ನಿಂದ ಪಡುಬಿದ್ರಿ ಕಡೆ ಬರುತ್ತಿದ್ದಾಗ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ತಡೆಬೇಲಿಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು.

ತಕ್ಷಣಕ್ಕೆ ಅವರನ್ನು ಕಾರ್ಕಳ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಸಹಸವಾರ ಕಿಶೋರ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನ ಪಡೆದು ಮೋಸಗೊಳಿಸಿದ ಅಪರಿಚಿತ ವ್ಯಕ್ತಿ

ಪಡುಬಿದ್ರಿ: ತನ್ನ ₹80 ಲಕ್ಷ ಮೌಲ್ಯದ ಜಾಗ ಮಾರಾಟವಾಗಿದ್ದು, ಅದರ ದಾಖಲೆಗಳು ಬ್ಯಾಂಕ್‌ನಲ್ಲಿ ಇರುವುದರಿಂದ ಅದನ್ನು ಬಿಡಿಸಿಕೊಳ್ಳಲು ಸಹಾಯ ಮಾಡುವಂತೆ ಕೇಳಿ ₹1,65,000 ಮೌಲ್ಯದ ಚಿನ್ನದ ಆಭರಣಗಳನ್ನು ತೆಗೆದುಕೊಂಡು ಮೋಸ ಮಾಡಿದ ಪ್ರಕರಣ ಮೂಡುಫಲಿಮಾರಿನಲ್ಲಿ ನಡೆದಿದೆ.

ಮೇ 6ರಂದು ಮೂಡುಫಲಿಮಾರಿನ ಶೋಭಾ ಎಂಬುವವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ನನ್ನ ಹೆಸರು ಹರೀಶ್ ಪುತ್ತೂರು ಎಂದು ಪರಿಚಯಿಸಿಕೊಂಡಿದ್ದ. ಕುಂದಾಪುರದಲ್ಲಿ ನನ್ನ ₹80 ಲಕ್ಷ ಮೌಲ್ಯದ ಜಾಗ ಮಾರಾಟವಾಗಿದೆ. ಅದರ ದಾಖಲೆಗಳು ಬ್ಯಾಂಕಿನಲ್ಲಿರುವುದರಿಂದ ಅದನ್ನು ಬಿಡಿಸಿಕೊಳ್ಳಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದನು. ಇದಕ್ಕೆ ಶೋಭಾ ಹಣ ಇಲ್ಲವೆಂದಿದ್ದರು. ಆದರೆ ಆಕೆಯ ಅಕ್ಕ ಶ್ಯಾಮಲಾ ಅವರನ್ನು ನಂಬಿಸಿ ಚಿನ್ನ ತೆಗೆದುಕೊಂಡು ಹೋಗಿದ್ದ. ಜಾಗ ಮಾರಾಟ ಮಾಡಿ ಬಂದಿರುವ ಹಣದಲ್ಲಿ ನಿಮ್ಮ ಚಿನ್ನದ ಮೌಲ್ಯಕ್ಕೆ ಹೆಚ್ಚುವರಿಯಾಗಿ ಹಣ ಕೊಡುತ್ತೇನೆ ಎಂದು ನಂಬಿಸಿ ಹೋಗಿದ್ದ.

ಬಳಿಕ ಮೇ 14ರಂದು ಇವರ ಮನೆಗೆ ಬಂದು, ಎರಡು ದಿನ ಇದ್ದು ಹೋಗಿದ್ದ. ಆದರೆ ಚಿನ್ನವನ್ನಾಗಲೀ ಹಣವನ್ನಾಗಲೀ ನೀಡದೇ ನಮ್ಮನ್ನು ಮೋಸಗೊಳಿಸಿದ್ದಾನೆ ಎಂದು ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಕಾಪು: ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಕಾಪು (ಪಡುಬಿದ್ರಿ): ಮೂಳೂರಿನ ಫ್ಲ್ಯಾಟ್‌ನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ಕಳವು ಮಾಡಿದ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಳೂರಿನ ಶ್ರೀ ಸಾಯಿ ವಾರ್ಚರ್‌ ಪ್ಲಾಟ್‌ನ ನಿವಾಸಿ ಆರ್ಜ್ಯೂ ಸರ್ಪರಾಜ್ ಆಗಸ್ಟ್ 8ರಂದು ಉಡುಪಿಗೆ ಹೋಗಿದ್ದರು. ಸಂಜೆ ಬಂದು ಕಪಾಟು ತೆರೆದು ನೋಡಿದಾಗ ಕಳವಾಗಿರುವುದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT