ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಂದೂರು: ರಸ್ತೆಯ ವೇಗತಡೆ ಚರ್ಚೆಗೆ ಗ್ರಾಸ

ಪೊಲೀಸ್, ಸಾರಿಗೆ ಇಲಾಖೆ ಅಭಿಪ್ರಾಯ ಪಡೆಯಲು ನಿರ್ಧಾರ
Last Updated 5 ಆಗಸ್ಟ್ 2021, 13:11 IST
ಅಕ್ಷರ ಗಾತ್ರ

ಬೈಂದೂರು: ಗುರುವಾರ ನಡೆದ ಮರವಂತೆ ಗ್ರಾಮಸಭೆಯಲ್ಲಿ ಮಹಾತ್ಮ ಗಾಂಧಿ ಮಾರ್ಗದಲ್ಲಿ ನಿರ್ಮಿಸಿರುವ ರಸ್ತೆಯ ವೇಗತಡೆಯನ್ನು ತೆಗೆಯಬೇಕು ಎಂದು ಒಂದು ಬಣ ಒತ್ತಾಯಿಸಿದರೆ, ಅದನ್ನು ಉಳಿಸಿಕೊಳ್ಳಬೇಕು ಎಂದು ಇನ್ನೊಂದು ತಂಡ ಆಗ್ರಹಿಸಿತು.

ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್ ಈ ವೇಗತಡೆಯ ಅಗತ್ಯದ ಬಗ್ಗೆ ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿ ಈ ಕುರಿತ ಚರ್ಚೆಯನ್ನು ಮೊಟಕುಗೊಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು.

ಲೀನಾ ಕ್ರಾಸ್ಟಾ, ಚಂದ್ರ ಉಗ್ರಾಣಿಮನೆ, ಜಿ. ರಾಮಕೃಷ್ಣ ಖಾರ್ವಿ, ಗಣೇಶ ಪೂಜಾರಿ, ಮನ್ಸೂರ್ ಇಬ್ರಾಹಿಂ, ಗ್ರೇಶನ್ ಕ್ರಾಸ್ಟಾ, ಕೆ. ವಿಘ್ನೇಶ್ವರ, ಗಣೇಶ ಮಧ್ಯಸ್ಥ, ಶಂಕರ ಪೂಜಾರಿ, ಶೇಷಗಿರಿ ಆಚಾರ್ಯ, ಕೃಷ್ಣ ಮೊಗವೀರ, ಹರೀಶ ಪೂಜಾರಿ ವಿವಿಧ ಬೇಡಿಕೆಗಳನ್ನು ಮಂಡಿಸಿದರು.

ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಎಸ್. ಜನಾರ್ದನ ಮಾತನಾಡಿ, ‘ಗ್ರಾಮಸಭೆಯನ್ನು ಹಳೆ ಪದ್ಧತಿಯಲ್ಲಿ ನಡೆಸುವುದನ್ನು ನಿಲ್ಲಿಸಿ, ತಿದ್ದುಪಡಿಯಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ರೀತಿ ನಡೆಸಬೇಕು. ಗ್ರಾಮಸಭೆಯ ಪರಮಾಧಿಕಾರ ಆಗಿರುವ ಫಲಾನುಭವಿಗಳ ಆಯ್ಕೆ ಮತ್ತು ವಾರ್ಷಿಕ ಯೋಜನೆಯನ್ನು ಗ್ರಾಮ ಸಭೆಯಲ್ಲೇ ಅಂತಿಮಗೊಳಿಸಬೇಕು’ ಎಂದರು.

ಮಾರ್ಗದರ್ಶಿ ಅಧಿಕಾರಿಯಾಗಿದ್ದ ಬೈಂದೂರು ಪಶುವೈದ್ಯಾಧಿಕಾರಿ ಡಾ. ನಾಗರಾಜ ಮಾತನಾಡಿ, ‘ಮಾಡಿದ ಸಾಧನೆ ಮತ್ತು ಗಳಿಸಿದ ಪ್ರಶಸ್ತಿಗಳ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಾಗಿರುವ ಮರವಂತೆ ಗ್ರಾಮ ಪಂಚಾಯಿತಿ ಈ ಪರಂಪರೆಯನ್ನು ಮುಂದುವರಿಸಿ ಇನ್ನಷ್ಟು ಎತ್ತರಕ್ಕೆ ಏರಬೇಕು’ ಎಂದರು.

ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ, ಶಿಕ್ಷಣ ಸಂಯೋಜಕ ಕರುಣಾಕರ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಿಂಧುಕುಮಾರಿ, ಉಪ ವಲಯ ಅರಣ್ಯಾಧಿಕಾರಿ ಸದಾಶಿವ, ಮೆಸ್ಕಾಂ ಎಂಜಿನಿಯರ್ ವಿಜಯೇಂದ್ರ, ಕೃಷಿ ಅಧಿಕಾರಿ ಗೋಪಾಲ್ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ನೀಡಿದರು.

ಕರ ಸಂಗ್ರಾಹಕ ಶೇಖರ ಮರವಂತೆ ಹಿಂದಿನ ಸಾಲಿನ ಲೆಕ್ಕಪತ್ರ ಮತ್ತು ಕೈಗೊಂಡ ಕಾಮಗಾರಿಗಳ ವಿವರ ನೀಡಿದರು. ಗಣಕಯಂತ್ರ ನಿರ್ವಾಹಕ ಗುರುರಾಜ್ ವಂದಿಸಿದರು. ಕಾರ್ಯದರ್ಶಿ ದಿನೇಶ ಶೇರುಗಾರ್ ವರದಿ ಮಂಡಿಸಿ ನಿರೂಪಿಸಿದರು. ಉಪಾಧ್ಯಕ್ಷ ಲೋಕೇಶ ಖಾರ್ವಿ ಇದ್ದರು.

ಹೆಚ್ಚುವರಿ ದೋಣಿ ಬೇಡಿಕೆ

ಮರವಂತೆ ಪ್ರವಾಹ ಬಾಧಿತ ಗ್ರಾಮವಾಗಿರುವುದರಿಂದ ಈಗಿರುವ ಎರಡು ದೋಣಿಗಳು ಸಾಲುವುದಿಲ್ಲ. ಹೆಚ್ಚುವರಿ ದೋಣಿ ಬೇಕು. ಅನ್ನಿಬೆಸೆಂಟ್ ಮಾರ್ಗದಿಂದ ನದಿತೀರಕ್ಕೆ ರಸ್ತೆ ನಿರ್ಮಿಸಬೇಕು. ನಾರಾಯಣ ಗುರು ಮಾರ್ಗದಲ್ಲಿ ವಿದ್ಯುತ್ ಮಾರ್ಗಕ್ಕೆ ಅಪಾಯಕಾರಿಯಾಗಿರುವ ದೊಡ್ಡ ಮರಗಳನ್ನು ಕಡಿಯಬೇಕು. ಅನುದಾನದ ವಿವರ ಒದಗಿಸಬೇಕು. ಬೀದಿನಾಯಿಗಳ ಉಪಟಳ ನಿಯಂತ್ರಿಸಬೇಕು, ಪಂಚಾಯಿತಿ ಆವರಣದಲ್ಲಿ ಇಂಟರ್‌ಲಾಕ್ ಅಳವಡಿಸಬೇಕು ಇತ್ಯಾದಿ ಬೇಡಿಕೆಗಳನ್ನು ಸಭೆಯ ಮುಂದಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT