ಉಡುಪಿ: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಶುಕ್ರವಾರ ಮಧ್ಯರಾತ್ರಿ ಬ್ರಹ್ಮಾವರದ ನೆರೆಭೀತಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೆರೆ ಹೆಚ್ಚಾಗಿ, ಜನಜೀವನ ಅಸ್ತವ್ಯಸ್ತವಾಗಬಹುದು ಎಂದು ಮಧ್ಯರಾತ್ರಿ 12.30 ರಿಂದ 2.30ರ ವರೆಗೆ ಬ್ರಹ್ಮಾವರದಉಪ್ಪೂರು, ಕುದ್ರುಬೆಟ್ಟು, ನಡುಬೆಟ್ಟು, ಬಾವಲಿಕುದ್ರು ಪ್ರದೇಶಗಳಿಗೆ ಭೇಟಿ ನೀಡಿದರು.
ಬ್ರಹ್ಮಾವರ ನೆರೆಪೀಡಿತವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು, ನೆರೆ ಬಂದರೆ ತಕ್ಷಣ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ತುರ್ತು ಕಾರ್ಯಾಚರಣೆಗೆ ಅಗತ್ಯ ಉಪಕರಣಗಳು ಹಾಗೂ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಬ್ರಹ್ಮಾವರ ತಹಸೀಲ್ದಾರ್ಗೆ ಸೂಚಿಸಿದರು.
ಬಳಿಕ ಬ್ರಹ್ಮಾವರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ ಡಿಸಿ, ಅಲ್ಲಿರುವ 24x7 ಸಹಾಯವಾಣಿ ಕೇಂದ್ರವನ್ನು ಪರಿಶೀಲಿಸಿದರು. ಸಿಬ್ಬಂದಿಯ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ಸೂಚಿಸಿ, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇದ್ದು, ಭಾರಿ ಮಳೆಯಾಗುವ ಸೂಚನೆ ಇದೆ. ಸಿಬ್ಬಂದಿ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭ ಎಸ್ಪಿ ನಿಶಾ ಜೇಮ್ಸ್, ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ ಉಪಸ್ಥಿತರಿದ್ದರು.